ಡೆಹ್ರಾಡೂನ್ : ಉತ್ತರಾಖಂಡ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮುಕ್ತಾಯಗೊಂಡಿದ್ದು, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದೆ, ಫಲಿತಾಂಶವನ್ನು ಮೇ 11ರಂದು ನ್ಯಾಯಾಲಯ ಘೋಷಿಸಲಿದೆ.
ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಹರೀಶ್ ರಾವತ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾವತ್ ಪರ 34 ಹಾಗೂ ಬಿಜೆಪಿ ಪರ 28 ಮತ ಚಲಾವಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವಿಶ್ವಾಸಮತ ಯಾಚನೆ ನಡೆದಿದ್ದು, ಈ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ 2ಗಂಟೆಗಳ ಕಾಲ ಉತ್ತರಾಖಂಡ ನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದು ಮಾಡಲಾಗಿತ್ತು.
ಉತ್ತರಾಖಂಡ ಬಂಡಾಯ ಕಾಂಗ್ರೆಸಿಗರ ಅನರ್ಹತೆ ಕುರಿತು ಸೋಮವಾರ ತೀರ್ಪಿತ್ತ ಉತ್ತರಾಖಂಡ ಹೈಕೋರ್ಟ್, ಸ್ಪೀಕರ್ ಆದೇಶವನ್ನು ಎತ್ತಿಹಿಡಿದಿತ್ತು. ಇದರ ಬೆನ್ನಲ್ಲೇ ಅನರ್ಹಗೊಂಡ 9 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಮಂಗಳವಾರದ ರಾವತ್ ವಿಶ್ವಾಸಮತ ಪರೀಕ್ಷೆಯಲ್ಲಿ ಮತ ಚಲಾವಣೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಮೊರೆ ಇಟ್ಟಿದ್ದರು. ಆದರೆ, ಮಧ್ಯಾಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ವಿಶ್ವಾಸಮತ ಪ್ರಕ್ರಿಯೆ ಯಿಂದ ಬಂಡಾಯ ಶಾಸಕರು ಹೊರಗುಳಿದಿದ್ದರು.