ಪಾಟ್ನಾ : ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಬಿಹಾರ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರಿಗೆ ನಿಷ್ಠೆ ಹೊಂದಿದ್ದ 7 ಮಂದಿ ಸಚಿವರನ್ನು ಜೆಡಿಯು ಅಮಾನತು ಮಾಡಿದೆ.
ಫೆ.20ರಂದು ವಿಧಾನಸಭೆಯಲ್ಲಿ ಬಹುಮತ ಸಬೀತು ಪಡಿಸಬೇಕಾಗಿದ್ದು, ಅದಕ್ಕೂ ಮುನ್ನ ಮಾಂಝಿ ಬೆಂಬಲಿಗರ ಬಲವನ್ನು ಕುಗ್ಗಿಸಲು ನಿತೀಶ್ ಕುಮಾರ್ ಬಳಗ ಈ ಕ್ರಮ ಕೈಗೊಂಡಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಅವರ ಸಲಹೆಯಂತೆ ಬಿಹಾರ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಬಶಿಷ್ಠ ನಾರಾಯಣ ಸಿಂಗ್ ಏಳು ಮಂದಿ ಶಾಸಕರನ್ನು ವಜಾಗೊಳಿಸಿದ್ದಾರೆ.
ನರೇಂದ್ರ ಸಿಂಗ್, ಬ್ರಿಶೇನ್ ಪಟೇಲ್, ಶಾಹಿದ್ ಅಲಿ ಖಾನ್, ಸಾಮ್ರಾಟ್ ಚೌಧರಿ, ನಿತಿಶ್ ಮಿಶ್ರಾ, ಮಹಾಚಂದ್ರ ಪ್ರಸಾದ್ ಸಿಂಗ್ ಮತ್ತು ಭೀಮ್ ಸಿಂಗ್ ವಜಾಗೊಂಡ ಜೆಡಿಯು ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರನ್ನು ಪಕ್ಷದಿಂದ ಈಗಾಗಲೇ ಉಚ್ಛಾಟನೆ ಮಾಡಲಾಗಿದೆ.
ಇದೇವೇಳೆ, ಬಿಜೆಪಿ ತಟಸ್ಥ ಧೋರಣೆ ತಾಳಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ತಂತ್ರ ರೂಪಿಸಲು, ತಮ್ಮ ಬೆಂಬಲಿಗರೊಂದಿಗೆ ಮಾಂಝಿ ಪ್ರತ್ಯೇಕ ಸಭೆ ನಡೆಸಿದ್ದಾರೆ.