ಬೆಂಗಳೂರು : ರಾಜ್ಯ ಸಚಿವ ಸಂಪುಟ ಪುನಾರಚನೆ ಕಸರತ್ತು ಕೊನೆಗೂ ಮುಗಿದಿದ್ದು, ನಿರೀಕ್ಷೆಯಂತೆ ಹದಿಮೂರು ಸಚಿವರು ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಾಜುಭಾಯಿ ರೂಢಬಾಯ್ ವಾಲಾ ಅವರು ನೂತನ ಸಚಿವರಿಗೆ ಅಧಿಕಾರದ ಗೌಪ್ಯತೆ ಹಾಗೂ ಪ್ರಮಾಣ ವಚನ ಭೋಧಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಚಿವ ಸಂಪುಟದ ಹಲವಾರು ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿ ಅರವಿಂದ ಜಾದವ್, ರಾಜ್ಯದ ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ರಾಜ್ಯ ಸರ್ಕಾರದ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
9 ಮಂದಿ ಕ್ಯಾಬಿನೆಟ್ ಸಚಿವರಾಗಿ ಹಾಗೂ 4 ಮಂದಿ ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 12 ಮಂದಿ ವಿಧಾನ ಸಭಾ ಸದಸ್ಯರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಕ್ಯಾಬಿನೆಟ್ ಸಚಿವರುಗಳೆಂದರೆ ಕಾಗೋಡು ತಿಮ್ಮಪ್ಪ, ಕೆ.ಆರ್. ರಮೇಶ್ಕುಮಾರ್, ಬಸವರಾಜ ರಾಯರೆಡ್ಡಿ, ಹೆಚ್.ವೈ. ಮೇಟಿ, ತನ್ವೀರ್ ಸೇಠ್, ಎಸ್.ಎಸ್. ಮಲ್ಲಿಕಾರ್ಜುನ, ಎಂ.ಆರ್. ಸೀತಾರಾಂ, ಸಂತೋಷ್ ಲಾಡ್ ಹಾಗೂ ರಮೇಶ್ ಲಕ್ಷ್ಮಣ ಜಾರಕಿಹೊಳಿ.
ಸ್ವತಂತ್ರ ಖಾತೆಯ ರಾಜ್ಯ ಸಚಿವರಾಗಿ ಪ್ರಿಯಾಂಕ ಎಂ. ಖರ್ಗೆ, ರುದ್ರಪ್ಪ ಲಮಾಣಿ, ಈಶ್ವರ ಖಂಡ್ರೆ ಹಾಗೂ ಪ್ರಮೋದ್ ಮದ್ವರಾಜ್ ಅವರುಗಳು ಪ್ರಮಾಣ ವಚನ ಸ್ವೀಕರಿಸಿದರು.