ನವದೆಹಲಿ : ಯೋಜನಾ ಆಯೋಗ ರದ್ದುಗೊಳಿಸುವ ಸಂಬಂಧ ಡಿಸೆಂಬರ್ನಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಯೋಜನಾ ಆಯೋಗದ ಬದಲಿಗೆ ಜಾರಿಗೆ ಬಂದಿರುವ, ಎಲ್ಲ ಮುಖ್ಯಮಂತ್ರಿಗಳೂ ಸದಸ್ಯರಾಗಿರುವ 'ನೀತಿ' ಆಯೋಗದ ಮೊದಲ ಆಡಳಿತ ಮಂಡಳಿ ಸಭೆಯನ್ನು ದೆಹಲಿಯಲ್ಲಿ ನಡೆಸಿದರು.
ಅಭಿವೃದ್ಧಿ ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು, ಹೂಡಿಕೆಗೆ ಪುನಶ್ಚೇತನ ನೀಡಲು ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗೊತ್ತಿ ಎಂದು ಕರೆ ನೀಡಿದ ಪ್ರಧಾನಿ, ಮಂದಗತಿಯ ಯೋಜನೆಗಳ ಬಗ್ಗೆ ಖುದ್ದು ನಿಗಾ ವಹಿಸಿ. ಬಾಕಿ ಇರುವ ಯೋಜನೆಗಳಿಗೆ ವೇಗ ನೀಡುವ ಸಲುವಾಗಿ ಅಧಿಕಾರಿಯೊಬ್ಬರನ್ನು ರಾಜ್ಯಮಟ್ಟದಲ್ಲಿ ನೇಮಕ ಮಾಡಿ ಎಂದು ಸಲಹೆ ಮಾಡಿದರು.
ಬಡತನ ನಿರ್ಮೂಲನೆ ಎಂಬುದು ದೇಶದ ಮುಂದಿರುವ ಅತಿದೊಡ್ಡ ಸವಾಲು. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ನೀತಿ ಆಯೋಗ (ಬದಲಾಗುತ್ತಿರುವ ಭಾರತಕ್ಕಾಗಿನ ರಾಷ್ಟ್ರೀಯ ಸಂಸ್ಥೆ) ಸಹಕಾರಯುತ ಹಾಗೂ ಸ್ಪರ್ಧಾತ್ಮಕ ಮಾದರಿಯನ್ನು ಅನುಸರಿಸಲಿದೆ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಸಿದ್ಧವಿದೆ ಮತ್ತು ಈ ಅನುದಾನಗಳನ್ನು ಬಳಸಿಕೊಳ್ಳಲು ಹೆಚ್ಚಿನ ಸ್ವಾತಂತ್ರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಭರವಸೆ ನೀಡಿದರು. 66 ಕೇಂದ್ರೀಯ ಯೋಜನೆಗಳನ್ನು ಮುಂದುವರಿಸಬೇಕೆ, ಬೇಡವೆ ಎಂಬ ಬಗ್ಗೆ ಸಲಹೆ ಮಾಡಲು, ಕೌಶಲ್ಯಾಭಿವೃದ್ಧಿ ಕುರಿತು ಶಿಫಾರಸು ನೀಡಲು ಹಾಗೂ ಸ್ವತ್ಛ ಭಾರತ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುವ ಕುರಿತು ಸಲಹೆಗಳನ್ನು ನೀಡಲು ಮುಖ್ಯಮಂತ್ರಿಗಳನ್ನು ಒಳಗೊಂಡ 3 ಉಪಸಮಿತಿ ಗಳನ್ನು ರಚಿಸುವುದಾಗಿ ಘೋಷಿಸಿದರು.