ಬೆಂಗಳೂರು : ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಅತಿವೃಷ್ಟಿಯಿಂದ ಮನೆಗಳು ಬಿದ್ದು ಹೋಗಿರುವುದಕ್ಕೆ ನೀಡುವ ಪರಿಹಾರ ಹಣ ಕಡಿಮೆ ಇದ್ದು, ರಾಜ್ಯ ಸರ್ಕಾರದಿಂದಲೇ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಎನ್ಡಿಆರ್ಎಫ್ ಮಾರ್ಗಸೂಚಿಗಳಲ್ಲಿ ಕಚ್ಚಾ ಮನೆಗೆ 20,000 ಹಾಗೂ ಪಕ್ಕಾ ಮನೆಗೆ 70,000 ರೂ. ನಿಗದಿಪಡಿಸಿದೆ. ಇದು ಅತ್ಯಂತ ಕಡಿಮೆ ಇದೆ ಎಂದು ತಿಳಿಸಿದರು.
ಸೆಪ್ಟೆಂಬರ್ ವರೆಗೆ ರಾಜ್ಯದಲ್ಲಿ ಮಳೆ ಬರಲಿಲ್ಲ. ಆಗಸ್ಟ್ 18ರಿಂದ 30ರ ವರೆಗೆ 8 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಬೀದರ್ ಗುಲ್ಬರ್ಗಾ ಯಾದಗಿರಿ, ಕೊಪ್ಪಳ, ಗದಗ, ಬಿಜಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು ಪ್ರವಾಹದಲ್ಲಿ 11 ಸಾವಿರ ಮನೆಗಳು ಬಿದ್ದಿವೆ. 22 ಜನ ಸಾವನ್ನಪ್ಪಿದ್ದಾರೆ. ಮನೆ ಬಿದ್ದವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಮೃತ ಪಟ್ಟ 22 ಜನರಿಗೆ ತಲಾ 1.5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಬೆಳೆ ಹಾನಿ ಪರಿಹಾರ ಕೂಡ ವಿತರಿಸಲಾಗಿದೆ ಎಂದರು.
ನೆರೆ ಹಾವಳಿಯಿಂದ ರಾಜ್ಯದಲ್ಲಿ ಈ ವರೆಗೆ 426 ಕೋಟಿ ನಷ್ಟ ಸಂಭವಿಸಿದೆ. ಕೇಂದ್ರಕ್ಕೆ 266 ಕೋಟಿ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ. ಕೇಂದ್ರ ತಂಡ ಶೀಘ್ರವೇ ನೆರೆ ಹಾವಳಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂದು ಅವರು ನುಡಿದರು.
ಪ್ರಧಾನ ಮಂತ್ರಿಗಳು 24ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ನಾನು ಖುದ್ದು ಅವರನ್ನು ಭೇಟಿ ಮಾಡಿ ಈ ವಿಚಾರವನ್ನು ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ರಾಜ್ಯದ 7 ಜಿಲ್ಲೆಗಳಲ್ಲಿ ಬರ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬೀದರ್, ರಾಮನಗರ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಸುಮಾರು 66 ತಾಲ್ಲೂಕುಗಳಲ್ಲಿ ಬರ ಇದೆ ಎಂದು ಅಂದಾಜು ಮಾಡಲಾಗಿದೆ. ಬರಪೀಡಿತ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ, ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಈ ತಿಂಗಳ ಅಂತ್ಯದಲ್ಲಿ ನಿರ್ದಿಷ್ಟವಾಗಿ ಎಷ್ಟು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಘೋಷಣೆ ಮಾಡಲಾಗುವುದು. ಬರದ ನಷ್ಟದ ಬಗ್ಗೆಯೂ ಕೇಂದ್ರಕ್ಕೆ ಪ್ರತ್ಯೇಕ ಮನವಿಯನ್ನು ಸಲ್ಲಿಸಲಾಗುವುದು. ಈ ಎಲ್ಲ ಪರಿಸ್ಥಿತಿ ನಿಭಾಯಿಸಲು ಸರ್ಕಾರಕ್ಕೆ ಅನುದಾನದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಬಳಿ ಒಟ್ಟು 224 ಕೋಟಿ ಅನುದಾನ ಲಭ್ಯವಿದೆ. ಅಗತ್ಯವಿದ್ದರೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ 23ರಂದು ಜಿಲ್ಲಾಧಿಕಾರಿಗಳ ಸಭೆ ಕರೆಯಲಾಗಿದೆ. ಜನವರಿಯಿಂದ ಈ ವರೆಗೆ ಬರ ನಿವಾರಣೆ 108 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ 169 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆಲಿಕಲ್ಲು ಮಳೆಯಿಂದಾದ ನಷ್ಟಕ್ಕೆ ಸಂಬಂಧಿಸಿದಂತೆ 336 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 1052 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಾರಿ ಪ್ರವಾಹ ಮತ್ತು ಬರ – ಎರಡೂ ಪರಿಸ್ಥಿತಿಗಳು ತಲೆದೋರಿವೆ. ರಾಜ್ಯದಲ್ಲಿ ಈ ವರ್ಷ ಸುಮಾರು 74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ 68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಆಹಾರ ಉತ್ಪಾದನೆಯಲ್ಲಿ 10 ಲಕ್ಷ ಟನ್ನಷ್ಟು ಕುಸಿತವಾಗುವ ಸಾಧ್ಯತೆ ಇದೆ.ಒಟ್ಟಾರೆ ರಾಜ್ಯ ಸರ್ಕಾರ ಬರ ಮತ್ತು ಪ್ರವಾಜಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ ಎಂದು ತಿಳಿಸಿದರು.