ಪಾಟ್ನಾ/ನವದೆಹಲಿ : ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಜೆಡಿಯು ಶಾಸಕರು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಿಹಾರ ಸಿಎಂ ಜಿತನ್ ರಾಂ ಮಾಂಝಿ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಿರುವ ಜೆಡಿಯು, ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತ್ತು.
ಭಾನುವಾರ ಜೆಡಿಯು ಶಾಸಕರು ಗವರ್ನರ್ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿದ್ದು, ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ರಚಿಸುತ್ತಿರುವ ಪ್ರಸ್ತಾಪದ ಬಗ್ಗೆ ಹೇಳಿದ್ದಾರೆ. ಆ ಭೇಟಿಯಲ್ಲಿ ಕಾಂಗ್ರೆಸ್, ಆರ್ಜೆಡಿ ನೇತಾರರು ಸೇರಿದಂತೆ ಸ್ವತಂತ್ರ ಅಭ್ಯರ್ಥಿಗಳು ಭಾಗಿಯಾಗಿದ್ದರು.
ಇದೀಗ ತಮ್ಮ ಪಕ್ಷದಲ್ಲಿ ಬಿಕ್ಕಟ್ಟು ಉಂಟಾಗಲು ಬಿಜೆಪಿಯೇ ಕಾರಣ ಎಂದು ಜೆಡಿಯು ದೂರಿದ್ದು, ಗರ್ವನರ್ ಅಥವಾ ರಾಷ್ಟ್ರಪತಿಯನ್ನು ಭೇಟಿ ಮಾಡುವ ಮುನ್ನ ತಾವು 130 ಶಾಸಕರನ್ನು ಕರೆತಂದು ಬಹುಮತ ಸಾಬೀತುಪಡಿಸುವುದಾಗಿ ಹೇಳಿದೆ.
ಏತನ್ಮಧ್ಯೆ ಬಂಡಾಯವೆದ್ದಿರುವ ಬಿಹಾರ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಸಂಜೆ 5ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಿಹಾರ ರಾಜಕೀಯದಲ್ಲಿನ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಮತ್ತು ಮಾಂಝಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಭಾರತೀಯ ಜನತಾ ಪಕ್ಷ ನಿತೀಶ್ ಕುಮಾರ್ ವಿರುದ್ಧ ಸಂಚು ನಡೆಸುತ್ತಿದೆ ಎಂದು ಜೆಡಿಯು ಆರೋಪಿಸಿದೆ. ಇದು ಮಾಸ್ಟರ್ ಮೈಂಡ್ ಗೇಮ್ ಎಂದು ದೂರಿರುವ ಜೆಡಿಯು, ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗಬಾರದು ಎಂಬುದು ಮಾಂಝಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೆಕ್ಕಾಚಾರವಾಗಿದೆ ಎಂದು ಜೆಡಿಯು ಮುಖಂಡ ಕೆಸಿ ತ್ಯಾಗಿ ತಿಳಿಸಿದ್ದಾರೆ.