ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಪ್ರಕ್ರಿಯೆ ಬಿರುಸುಪಡೆದುಕೊಂಡಿದೆ. ಕೊರೆಯುವ ಚೆಳಿಯನ್ನೂ ಲೆಕ್ಕಿಸದೇ ಮತದಾರರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ.
ಬೆಳಿಗ್ಗೆ 11ಗಂಟೆಯವರೆಗೆ ಶೇ.19.7ರಷ್ಟು ಮತದಾನ ನಡೆದ ಬಗ್ಗೆ ವರದಿಯಾಗಿದೆ. ಈ ನಡುವೆ ರಾಜಕೀಯ ಧುರೀಣರು, ಘಟಾನುಘಟಿ ನಾಯಕರು ಮತದಾನ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರು ಬಿ.ಕೆ.ದತ್ ಕಾಲೋನಿಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್ ಜನರು ಭೃಷ್ಟಾಚಾರ ಮತ್ತು ಲಂಚದಿಂದ ಸ್ವತಂತ್ರರಾಗಲು ಬಯಸಿದ್ದು, ಅದರನ್ವಯ ಮತದಾನ ಮಾಡಲಿದ್ದಾರೆ. ಕೊನೆಯಲ್ಲಿ ಸತ್ಯಕ್ಕೆ ಗೆಲುವು ಸಿಗಲಿದ್ದು, ಇದು ಜನರ ಗೆಲುವಾಗಲಿದೆ ಎಂದರು.
ಭ್ರಷ್ಟಾಚಾರ ತೊಲಗಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಅವರು ಕರೆ ನೀಡಿದ್ದಾರೆ. ಇನ್ನು ನಿನ್ನೆ ರಾತ್ರಿ ಬಿಜೆಪಿ ನಾಯಕರು ಸಾರಾಯಿ ಹಂಚಿದ್ದು, ಸಾರಾಯಿ ಹಂಚಿದವರಿಗೆ ಮತಹಾಕಬೇಡಿ ಎಂದು ತಿಳಿಸಿದ್ದಾರೆ.
ದಕ್ಷಿಣ ದೆಹಲಿಯ ನೀತಿ ಬಾಗ್ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ, ಸುದ್ದಿಗಾರರೊಂದಿಗೆ ಮಾತನಾಡಿ ಇಂದು ದೆಹಲಿಗೆ ಐತಿಹಾಸಿಕ ದಿನವಾಗಿದ್ದು , ಸ್ವಚ್ಚ, ಸುಶಿಕ್ಷಿತ ಮತ್ತು ಸುರಕ್ಷಿತ ದೆಹಲಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂದು ಕರೆ ನೀಡಿದರು.
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೇನ್, ಕೇಂದ್ರ ಸಚಿವ ಹರ್ಷವರ್ಧನ್, ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ತಮ್ಮ ಹಕ್ಕುಚಲಾಯಿಸಿದ್ದಾರೆ.
ದೆಹಲಿಯ ನಿರ್ಮಾಣ್ ಭವನ ಮತಗಟ್ಟೆಯಲ್ಲಿ ಮತದಾನ ಮಾಡಿದ ಸೋನಿಯಾ ಗಾಂಧಿ, ದೆಹಲಿ ಜನತೆ ಏನು ಬಯಸುತ್ತಾರೋ ಅದೇ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶೀಲಾ ದೀಕ್ಷಿತ್, ಇದು ವ್ಯಕ್ತಿತ್ವ ಆಧಾರಿತ ಚುನಾವಣೆ. ಫೆ.10ರವರೆಗೆ ಕಾದುನೋಡಿ ಎಂದು ಹೇಳಿದ್ದಾರೆ.