ಬೆಂಗಳೂರು : ವಿಶ್ವ ಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರಿಗೆ ಬೆಂಗಳೂರು ನಗರ ಪ್ರವೇಶ ನಿಷೇಧಿಸಿರುವ ಹಿನ್ನೆಲೆಯಲ್ಲಿ ಫೆ.8ರಂದು ವಿರಾಟ ಹಿಂದು ಸಮಾಜೋತ್ಸವದಲ್ಲಿ ಅವರ ಧ್ವನಿ-ದೃಶ್ಯ ಮುದ್ರಿತ ಭಾಷಣ ಅಥವಾ ಬೇರೊಂದು ಭಾಗದಿಂದ ಮಾಡುವ ಭಾಷಣದ ನೇರ ಪ್ರಸಾರದ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ.
ತೊಗಾಡಿಯಾ ಅವರೇ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾಜೋತ್ಸವದ ಮುಖ್ಯ ಮತ್ತು ಆಕರ್ಷಕ ಭಾಷಣಕಾರರಾಗಿದ್ದರಿಂದ ಪರೋಕ್ಷವಾಗಿಯಾದರೂ ಅವರ ಮಾತುಗಳನ್ನು ಜನರಿಗೆ ತಲುಪಿಸುವ ಬಗ್ಗೆ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಘಟಕ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.
ಆದರೆ, ವಿಶ್ವ ಹಿಂದು ಪರಿಷತ್ತಿನ ಈ ಆಲೋಚನೆಗೆ ರಾಜ್ಯ ಸರ್ಕಾರ ಅಥವಾ ಬೆಂಗಳೂರು ಪೊಲೀಸರು ಯಾವ ಕ್ರಮ ಅನುಸರಿಸುತ್ತಾರೆ, ಇದು ತೊಗಾಡಿಯಾ ಪ್ರವೇಶ ನಿರ್ಬಂಧಕ್ಕೆ ಅಸ್ತು ಎಂದಿರುವ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆಯೆ ಎಂಬುದು ಸ್ಪಷ್ಟವಾಗಿಲ್ಲ.
ಫೆ.7ರಂದು ತೊಗಾಡಿಯಾ ಅವರು ಬೆಂಗಳೂರು ನಗರಕ್ಕೆ ಸಮೀಪದಲ್ಲಿನ ತಮಿಳುನಾಡು ಗಡಿ ಭಾಗದಲ್ಲಿರುವ ಹೊಸೂರಿಗೆ ಆಗಮಿಸುವ ಸಾಧ್ಯತೆಯಿದ್ದು, ಈ ವೇಳೆ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ತೊಗಾಡಿಯಾ ಒಪ್ಪಿದಲ್ಲಿ ಫೆ.8ರಂದು ಮಾಡಬೇಕಾಗಿದ್ದ ಭಾಷಣ ದೃಶ್ಯವನ್ನು ಫೆ.7ರಂದು ಚಿತ್ರೀಕರಿಸಿಕೊಳಳ್ಳಲಾಗುತ್ತದೆ. ಇಲ್ಲವೇ ಬೇರೊಂದು ಪ್ರದೇಶದಿಂದ ನಾನು ಸಮಾಜೋತ್ಸವದ ಸಮಯದಲ್ಲಿಯೇ ಮಾತನಾಡುವುದನ್ನು ನೇರ ಪ್ರಸಾರ ಮಾಡಬಹುದು ಎಂದು ತೊಗಾಡಿಯಾ ಹೇಳಿದರೆ ಅದಕ್ಕೆ ಪರಿಷತ್ ವ್ಯವಸ್ಥೆ ಕಲ್ಪಿಸಲಿದೆ. ಒಟ್ಟಿನಲ್ಲಿ ಸಮಾಜೋತ್ಸವ ಸಾಕಷ್ಟು ಕುತೂಹಲವನ್ನಂತೂ ಮೂಡಿಸಿದೆ.