Basavanagudi : ದೇಶದಲ್ಲಿ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಘರ್ ವಾಪಸಿ ನಿಲ್ಲಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷದ್ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷದ್ ಸ್ವರ್ಣ ಜಯಂತಿ ಉತ್ಸವದ ಅಂಗವಾಗಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಪೊಲೀಸರು ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ದೃಶ್ಯ ಮತ್ತು ಧ್ವನಿ ಮುದ್ರಿತ ಭಾಷಣದಲ್ಲಿ ಸಂದೇಶ ರವಾನಿಸಿದ ತೊಗಾಡಿಯಾ ಭಾರತದಲ್ಲಿ ಹಿಂದೂಗಳೇ ಸಾರ್ವಭೌಮರು. ಹಿಂದೂಗಳ ದನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನಾತ್ಮಕ ಹಿಂದೂ ಆಡಳಿತ ವ್ಯವಸ್ಥೆ ನಮ್ಮ ಗುರಿ ಎಂದು ಗುಡುಗಿದ್ದಾರೆ.
ಇನ್ನೇನಿದ್ದರೂ ಹಿಂದೂ ಪರ್ವ. ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಭಾರತದಲ್ಲಿ ಹಿಂದೂಗಳೇ ಸಾರ್ವಭೌಮರು. ಹಿಂದೂಗಳ ದನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರಾದರೂ ಅಂತಹ ಪ್ರಯತ್ನಕ್ಕೆ ಮುಂದಾದರೂ ಅದು ಅಸಾಧ್ಯದ ಮಾತು. ನಾವು ನಮ್ಮ ಗತವೈಭವವನ್ನು ಪಡೆದೇ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಲವ್ ಜಿಹಾದ್ ನಿಲ್ಲಿಸುತ್ತೇವೆ. ಸಮಾನ ನಾಗರಿಕ ಸಂಹಿತೆ ಜಾರಿಗೆ ತರುತ್ತೇವೆ. 30 ಕೋಟಿ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರ ಹಾಕುತ್ತೇವೆ. ಯಾವುದೇ ಕಾರಣಕ್ಕೂ ಮರುಮತಾಂತರ ನಿಲ್ಲುವುದಿಲ್ಲ ಎಂದ ಅವರು, ಸಂವಿಧಾನಾತ್ಮಕ ಹಿಂದೂ ಆಡಳಿತ ವ್ಯವಸ್ಥೆ ನಮ್ಮ ಗುರಿ ಎಂದು ತಿಳಿಸಿದರು.
ಎರಡು ಸಾವಿರ ವರ್ಷಗಳ ಹಿಂದೆ ಪ್ರಪಂಚದ ಅಧಿಕಾರ, ಸಂಪತ್ತು, ಶಿಕ್ಷಣ, ವ್ಯಾಪಾರ ಎಲ್ಲವೂ ಹಿಂದೂಗಳ ಹಿಡಿತದಲ್ಲಿತ್ತು. ಆದರೆ ಇಂದು ಅದೆಲ್ಲವೂ ನಮ್ಮ ಕೈತಪ್ಪಿ ಹೋಗಿದೆ. ಹಿಂದೂಗಳ ಮೇಲೆ ನಡೆದ ಆಕ್ರಮಣಗಳಿಂದಾಗಿ ಹಿಂದೂಗಳ ಸಾರ್ವಭೌಮತೆ ಕುಸಿದು ಹೋಗಿದೆ. ಎರಡು ಸಾವಿರ ವರ್ಷಗಳ ಹಿಂದೆ ಇದ್ದಂತಹ ಹಿಂದೂಗಳ ಸಾರ್ವಭೌಮತ್ವವನ್ನು ಮರಳಿ ಪಡೆಯಬೇಕಾಗಿದೆ. ಇದಕ್ಕಾಗಿ ನೂರು ಕೋಟಿ ಹಿಂದೂಗಳು ಒಂದಾಗಬೇಕು, ಜಾಗೃತ ಹಿಂದೂಗಳಾಗಬೇಕು. ಜಾತಿ-ಜಾತಿಗಳಲ್ಲಿ ಹರಿದು ಹಂಚಿ ಹೋಗಿರುವ ಹಿಂದೂಗಳನ್ನು ಒಂದಾಗಿಸಿ ಅಸ್ಪೃಶ್ಯತೆಯನ್ನು ಹೊಗಲಾಡಿಸಬೇಕು. 'ನಾವೆಲ್ಲಾ ಹಿಂದೂಗಳು, ಹಿಂದೂಗಳೆಲ್ಲಾ ಒಂದೆ' ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.