ಬೆಂಗಳೂರು : ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ನಿಷೇಧ ವಿಚಾರ ವಿಧಾನಪರಿಷತ್ ನಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿ ಪ್ರತಿಭಟನೆಗೆ ಸಾಕ್ಷಿಯಾಯಿತು. ಈ ವೇಳೆ ತೊಗಾಡಿಯಾಗೆ ನಿಷೇಧ ಹಾಕಿರುವ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬೆಂಗಳೂರಿಗೆ ಬರದಂತೆ ತೊಗಾಡಿಯಾಗೆ ನಿಷೇಧ ಹೇರಿರುವ ಕ್ರಮವನ್ನು ಪ್ರಸ್ತಾಪಿಸಿದರು. ರಾಜ್ಯ ಸರ್ಕಾರ ಒಳ್ಳೆಯವರಿಗೆ ನಿಷೇಧ ಹೇರುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ತೊಗಾಡಿಯಾ ಒಳ್ಳೆಯವರು ಅದಕ್ಕೆ ಅವರಿಗೆ ಬ್ಯಾನ್ ಮಾಡಿದ್ದೇವೆ. ಸಮಾಜದ ಶಾಂತಿ ಕಾಪಾಡುವ ಹಿನ್ನಲೆಯಲ್ಲಿ ನಿರ್ಬಂಧ ಹಾಕಲಾಗಿದೆ ಎಂದರು.
ತೊಗಾಡಿಯಾ ಅವರನ್ನು ನಿಷೇಧಿಸಿರುವುದರಿಂದ ಭಾರೀ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸರ್ವಾಧಿಕಾರಿಯೆಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ.
ಇದರಿಂದ ಆಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಈಶ್ವರಪ್ಪ ಆರೋಪಿಸಿದರು.
ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯ ಯಾವುದೇ ಬೆದರಿಕೆಗಳಿಗೆ ಜಗ್ಗುವುದಿಲ್ಲ, ನಿರ್ಬಂಧ ತೆರವುಗೊಳಿಸುವುದಿಲ್ಲ. ತೊಗಾಡಿಯಾರಂತಹವರು ಒಂದು ರಾಜ್ಯದ ಶಾಂತಿ ಕದಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
ತೊಗಾಡಿಯಾ ಅವರ ಮೇಲೆ ದೇಶಾದ್ಯಂತ 45 ಪ್ರಕರಣಗಳು ದಾಖಲಾಗಿವೆ. ಅವರು ಒಳ್ಳೆಯವರಾಗಿದ್ದರೆ ಪ್ರಕರಣಗಳು ಏಕೆ ದಾಖಲಾಗುತ್ತಿದ್ದವು. ರಾಜ್ಯದಲ್ಲೂ ಕೂಡ ಅವರ ಮೇಲೆ ನಿಷೇಧ ಹೇರಲಾಗಿತ್ತು, 2003ರಲ್ಲಿ ಬೆಳಗಾಂನಲ್ಲಿ ನಿಷೇಧ ಹೇರಲಾಗಿತ್ತು, 2006ರಲ್ಲಿ ನಿಷೇಧ ತರಲಾಗಿತ್ತು, ಪ್ರಚೋದನಾಕಾರಿ ಭಾಷಣ ಮಾಡಿ ಶಾಂತಿ-ನೆಮ್ಮದಿ ಹಾಳು ಮಾಡಿ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಳಾಗುವ ಕಾರಣದಿಂದ ಪೊಲೀಸ್ ಆಯುಕ್ತರು ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ತೊಗಾಡಿಯಾ ನ್ಯಾಯಾಲಯದ ಮೊರೆ ಹೋಗಿದ್ದಾರೆ, ನ್ಯಾಯಾಲಯದ ತೀರ್ಪು ಏನು ಬರುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.
ಅಲ್ಲದೇ ತೊಗಾಡಿಯಾ ನಿರ್ಬಂಧದ ವಿಷಯ, ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶವಿಲ್ಲ. ಪ್ರಕರಣ ನ್ಯಾಯಾಲಯದ ಮುಂದಿರುವುದರಿಂದ ಚರ್ಚೆಗೆ ಅವಕಾಶ ನೀಡಬಾರದು. ನಾವು ಹಿಂದೂ ಸಮಾಜೋತ್ಸವ ನಡೆಸಲು ನಿಷೇಧ ಮಾಡಿಲ್ಲ. ತೊಗಾಡಿಯಾ ಅವರಿಗೆ ಮಾತ್ರ ನಿಷೇಧ ಮಾಡಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರ ಸಂವಿಧಾನಕ್ಕೆ ಗೌರವ ಕೊಟ್ಟು ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತದೆ. ರಾಜ್ಯದ ಎಲ್ಲ ಜನ ಶಾಂತಿಯಿಂದ ಇರುವಂತೆ ಯಾವುದೇ ಕೋಮುಗಲಭೆಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕಾಗಿ ಪ್ರವೀಣ್ಭಾಯ್ ತೊಗಾಡಿಯಾ ಪುತ್ತೂರಿಗೆ ಬಂದು ಭಾಷಣ ಮಾಡಿ ಹೋದ ನಂತರ ಉಪ್ಪಿನಂಗಡಿಯಲ್ಲಿ ಕೋಮುಗಲಭೆ ಉಂಟಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ನೀವು ಸಮಾವೇಶಕ್ಕೆ ವಿರೋಧ ಮಾಡಿದರೆ ಇನ್ನೂ ಒಂದು ಲಕ್ಷ ಜನ ಜಾಸ್ತಿ ಸೇರುತ್ತಾರೆ. ನೀವು ಸರ್ವಾಧಿಕಾರಿಯೆಂದು ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂದರು. ಇಂತಹ ಪರಿಸ್ಥಿತಿಗಳನ್ನೆಲ್ಲ ಎದುರಿಸುವ ಶಕ್ತಿ ತಮಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಈ ವೇಳೆ ಬಿಜೆಪಿ ಸದಸ್ಯರು ತೊಗಾಡಿಯಾ ನಿಷೇಧ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಸದನ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅಲ್ಲದೇ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸದನದಿಂದ ಹೊರ ನಡೆದರು.