ಬೆಂಗಳೂರು : ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ, ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ ಈಶ್ವರಪ್ಪ ಅವರು, ರಾಜ್ಯದಲ್ಲಿ ಟಿವಿ ಚಾನೆಲ್, ದಿನ ಪತ್ರಿಕೆಗಳನ್ನು ಬ್ಯಾನ್ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದರು.
ಬುಧವಾರ ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸಲು ಅನುಮತಿ ನೀಡುವಂತೆ ಸಭಾಪತಿ ಡಿಎಚ್ ಶಂಕರಮೂರ್ತಿ ಅವರಲ್ಲಿ ಈಶ್ವರಪ್ಪ ಅನುಮತಿ ಕೇಳಿದ್ದರು.
ನಂತರ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಹಾಡಹಗಲೇ ಕಳ್ಳರಿಂದ ಪೊಲೀಸರ ಕೊಲೆ ನಡೆದಿದೆ. ಅತ್ಯಾಚಾರ ಎನ್ನುವುದು ಸರಾಗವಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟದಂತೆ ರೇಪ್ ರಾಜ್ಯದಲ್ಲಿ ಸರಾಗವಾಗಿ ನಡೆಯುತ್ತಿದೆ. ಹಾಗಾಗಿ ದಿನಂಪ್ರತಿ ಟಿವಿ ಚಾನೆಲ್, ಪತ್ರಿಕೆಗಳಲ್ಲಿನ ವರದಿ ಕಣ್ಣಲ್ಲಿ ನೋಡಲಾಗ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಟಿವಿ ಚಾನೆಲ್ ಗಳನ್ನು, ದಿನ ಪತ್ರಿಕೆಗಳನ್ನು ಬ್ಯಾನ್ ಮಾಡಿ ಎಂದು ಈಶ್ವರಪ್ಪ ಸರ್ಕಾರಕ್ಕೆ ಆಗ್ರಹಿಸಿದರು.