ಬೆಂಗಳೂರು : ವಿಧಾನ ಪರಿಷತ್ತಿನ ಸಭಾ ನಾಯಕರಾಗಿ ಡಾ.ಜಿ.ಪರಮೇಶ್ವರ್ ಅವರನ್ನು ಹಾಗೂ ಸರ್ಕಾರದ ಮುಖ್ಯ ಸಚೇತಕರಾಗಿ ಐವಾನ್ ಡಿಸೋಜ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಧನಾ ಪರಿಷತ್ತಿನ ಸಭಾಧ್ಯಕ್ಷರಾದ ಡಿ.ಹೆಚ್. ಶಂಕರ ಮೂರ್ತಿ ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು ಮೇಲ್ವನೆಯಲ್ಲಿ ಬಹಳ ವಿಚಾರಗಳು ವಿಸ್ತಾರವಾಗಿ ಮತ್ತು ಅರ್ಥಗರ್ಭಿತವಾಗಿ ಚರ್ಚೆಯಾಗುತ್ತದೆ. ಆದರೆ ಕೆಲವು ಬಾರಿ ನಿಯಮಗಳನ್ನು ಮೀರಿ ಹೋಗುವುದರಿಂದ ಆರೋಗ್ಯಕರ ಚರ್ಚೆಗಳು ಮಹತ್ವವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ನಿಯಮಗಳ ಚೌಕಟ್ಟಿನಲ್ಲಿ ಚರ್ಚೆಗಳು ನಡೆಯಲು ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರು ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು.
ಸರ್ಕಾರದ ಮುಖ್ಯ ಸಚೇತಕರಾಗಿ ನೇಮಕಗೊಂಡಿರುವ ಐವಾನ್ ಡಿಸೋಜ ಅವರು ಮಾತನಾಡಿ, ಸರ್ಕಾರದ ಮುಖ್ಯ ಸಚೇತಕರ ಜವಾಬ್ದಾರಿಗಳ ಬಗ್ಗೆ ಅರಿವಿದೆ, ಯಾವುದೇ ಕಾರಣಕ್ಕೂ ಸದನದ ಸಮಯವನ್ನು ಹಾಳು ಮಾಡದೇ ಸದನವನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ ಎಂದರು.
ನೂತನ ಸಭಾ ನಾಯಕರು ಮತ್ತು ಮುಖ್ಯ ಸಚೇತಕರಿಗೆ ಹಿಂದಿನ ಸಭಾ ನಾಯಕರಾದ ಎಸ್.ಆರ್. ಪಾಟೀಲ್, ವಿರೋಧ ಪಕ್ಷದ ನಾಯಕರಾದ ಕೆ. ಎಸ್. ಈಶ್ವರಪ್ಪ ಅವರು ಅಭಿನಂದನೆ ಸಲ್ಲಿಸಿದರು.