ನವದೆಹಲಿ : 'ಹವಾಲ' ಹಣವನ್ನು ದೇಣಿಗೆಯಾಗಿ ಸ್ವೀಕರಿಸುವ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿ ಎಂದು ಆಮ್ ಆದ್ಮಿ ಪಕ್ಷ ಸವಾಲು ಹಾಕಿದೆ. ಪಕ್ಷಕ್ಕೆ ಬಂದಿರುವ ದೇಣಿಗೆ ಬಗ್ಗೆ ಎನ್.ಡಿ.ಎ ಸರ್ಕಾರ ತನಿಖೆ ನಡೆಸಿದರೆ ತಾವು ನಿರ್ದೋಷಿಗಳಾಗಿ ಹೊರಬರುತ್ತೇವೆ ಎಂದು ಆಪ್ ವಿಶ್ವಾಸ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ತನಿಖೆಗೆ ಆದೇಶ ನೀಡದೇ ಇದ್ದಲ್ಲಿ, ತಮ್ಮ ವಿರುದ್ಧ ತನಿಖೆ ನಡೆಸುವಂತೆ ತಾವೇ ತನಿಖಾ ಸಂಸ್ಥೆಗಳ ಮೊರೆ ಹೋಗುವುದಾಗಿ ಆಮ್ ಆದ್ಮಿ ಪಕ್ಷ ಎಚ್ಚರಿಸಿದೆ. ದೇಶದ ಬ್ಯಾಂಕ್ ವ್ಯವಸ್ಥೆ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ಕೇಂದ್ರ ವಿತ್ತ ಸಚಿವರು, ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ಬಂದಿರುವ ಬ್ಯಾಂಕ್ ನ ವ್ಯವಸ್ಥಾಪಕರನ್ನು ವಿಚಾರಣೆ ಮಾಡಲಿ ಎಂದು ಆಪ್ ಸಲಹೆ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತೇಜೋವಧೆ ಮಾಡುವುದಕ್ಕಾಗಿ ಈ ರೀತಿಯ ಹವಾಲ ಹಣದ ದೇಣಿಗೆ ಆರೋಪ ಮಾಡಲಾಗುತ್ತಿದೆ. ಆಪ್ ಸ್ವಯಂ ಸೇವಾ ಕ್ರಿಯಾ ಮಂಚ್' (ಆವಂ) ಹಾಗೂ ಬಿಜೆಪಿ ಒಳಒಪ್ಪಂದ ಮಾಡಿಕೊಂಡು ಈ ರೀತಿಯ ಸಂಚು ರೂಪಿಸಿವೆ ಎಂದು ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಬ್ಯಾಂಕ್ ಗ್ರಾಹಕರ ಸಂಪೂರ್ಣ ಮಾಹಿತಿಯನ್ನು ಪಡೆಯಲು ಆಮ್ ಆದ್ಮಿ ಪಕ್ಷಕ್ಕೆ ಸಾಧ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದೆ.