ಮುಂಬೈ : ಕಳೆದ ಆರು ತಿಂಗಳ ಅವಧಿಯಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪ-ದೋಷಗಳ ಲಾಭ ಪಡೆದು ದುಬೈ, ಹಾಂಕಾಂಗ್ ಮೊದಲಾದ ವಾಣಿಜ್ಯ ಕೇಂದ್ರಗಳಿಗೆ, ಕರವನ್ನು ವಂಚಿಸಿ ’ಸಕ್ರಮ ಹವಾಲಾ' ಮೂಲಕ ಸುಮಾರು 4,400 ಕೋಟಿ ರೂ. ರವಾನಿಸಲಾಗಿರುವುದನ್ನು ಅನುಷ್ಠಾನ ನಿರ್ದೇಶನಾಲಯವು ಪತ್ತೆ ಹಚ್ಚಿದೆ.
ಹಾಗಿದ್ದರೂ ಇದೇ ಆರು ತಿಂಗಳ ಅವಧಿಯಲ್ಲಿ ಸರ್ಕಾರದ ಕಣ್ಣು ತಪ್ಪಿಸಿ ವಿದೇಶಗಳಿಗೆ ರವಾನಿಸಲಾಗಿರುವ ಮೊತ್ತವು ಏನಿಲ್ಲವೆಂದರೂ ಇದರ ಮೂರು ಪಟ್ಟಾದರೂ ಇದ್ದಿರಬಹುದೆಂದು ಅನುಷ್ಠಾನ ನಿರ್ದೇಶನಲಾಯದ ಅಧಿಕಾರಿಗಳು ಶಂಕಿಸಿದ್ದಾರೆ.
ಇತ್ತೀಚೆಗೆ ಅನುಷ್ಠಾನ ನಿರ್ದೇಶನಲಾಯವು ದಕ್ಷಿಣ ಮುಂಬಯಿಯ ಬ್ಯಾಂಕ್ ಒಂದರ ಲಾಕರ್ ನಲ್ಲಿ ಇರಿಸಲಾಗಿದ್ದ 83 ಲಕ್ಷ ರೂ. ಅಕ್ರಮ ಹಣವನ್ನು ವಶಪಡಿಸಿಕೊಂಡಿತ್ತು. ಇದೇ ರೀತಿ ಇನ್ನೂ ಎರಡು ಲಾಕರ್ ಗಳಿಂದ ಬಹುತೇಕ ಇಷ್ಟೇ ಪ್ರಮಾಣದ ಹಣ ವಶವಾಗಿತ್ತು. ಈ ಹಣವನ್ನು ಖೋಟಾ ಆಮದು ದಾಖಲೆ ಪತ್ರಗಳ ಮೂಲಕ ಅಥವಾ ಆಮದು ಮುಂಗಡ ಪಾವತಿಯ ರೂಪದಲ್ಲಿ ದೊಡ್ಡ ದೊಡ್ಡ ಕುಳಗಳು ವಿದೇಶಕ್ಕೆ ರವಾನಿಸುವ ಕುಟಿಲೋಪಾಯವನ್ನು ಅನುಸರಿಸುತ್ತಿದ್ದಾರೆ ಎಂದು ಅನುಷ್ಠಾನ ನಿರ್ದೇಶನಾಲಯ ಶಂಕಿಸಿದೆ.
ಈ ರೀತಿ ಅಕ್ರಮವಾಗಿ "ಸಕ್ರಮ ಹವಾಲಾ' ಮೂಲಕವೇ ವಿದೇಶಕ್ಕೆ ಭಾರೀ ಪ್ರಮಾಣದಲ್ಲಿ ಕಪ್ಪು ಹಣವನ್ನು ರವಾನಿಸುವುದು ಈಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಯಾಕೆಂದರೆ ಈ ಬಗೆಯ ಸಕ್ರಮ ಹವಾಲಾ ವ್ಯವಹಾರವನ್ನು ನಿರ್ಬಂಧಿಸುವ ಅಥವಾ ಕಾನೂನು ವ್ಯಾಪ್ತಿಗೆ ಒಳಪಡಿಸಿ ಶಿಕ್ಷಿಸುವಂತಹ ಬಲಿಷ್ಠ ಕಾನೂನುಗಳು ಇನ್ನೂ ಸೃಷ್ಟಿಯಾಗಿಲ್ಲ ಎಂದು ನಿರ್ದೇಶನಾಲಯ ಹೇಳುತ್ತಿದೆ.
ಈ ಬಗೆಯ ಹಲವು ಸಕ್ರಮ ಹವಾಲಾ ಹಣ ರವಾನೆಯ ಪ್ರಕರಣಗಳ ಬೆಂಬತ್ತಿರುವ ಅನುಷ್ಠಾನ ನಿರ್ದೇಶನಾಲಯವು ಈ ಬಗ್ಗೆ ಆಳವಾದ ತನಿಖೆಯನ್ನು ನಡೆಸುತ್ತಿದೆ. ಆದರೆ ಈ ವರೆಗೆ ದೊಡ್ಡ ಸಾಧನೆಯನ್ನೇನೂ ಮಾಡಲಾಗಿಲ್ಲ ಎಂದು ಹೇಳಲಾಗಿದೆ.