ನವದೆಹಲಿ : 'ದೆಹಲಿ ವಿಧಾನಸಭಾ ಚುನಾವಣೆ'ಗೆ ಕೆಲವೇ ದಿನಗಳಿದ್ದು, ಆಮ್ ಆದ್ಮಿ ಪಕ್ಷದ ವಿರುದ್ಧ ಹೊಸ ಆರೋಪ ಕೇಳಿಬಂದಿದೆ.
ಈ ಬಾರಿ ಆಮ್ ಆದ್ಮಿ ಪಕ್ಷದ ಸ್ವಯಂ ಸೇವಕ ಘಟಕದ ಸದಸ್ಯರೇ ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಹವಾಲ ಮೂಲಕ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ದೆಹಲಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಸ್ವಯಂ ಸೇವಕ ಮಂಚ್(ಎವಿಎಎಂ) ಸದಸ್ಯರು ಫೇಕ್ ಕಂಪನಿಗಳಿಂದ ಆಮ್ ಆದ್ಮಿ ಪಕ್ಷ ಅಪಾರ ಪ್ರಮಾಣದ ದೇಣಿಗೆ ಪಡೆದಿದೆ ಎಂದು ಆರೋಪಿಸಿದ್ದಾರೆ.
ಪಕ್ಷಕ್ಕೆ ದೇಣಿಗೆ ನೀಡಿರುವ ಕಂಪನಿಗಳ ಬಗ್ಗೆ ಆಮ್ ಆದ್ಮಿ ಪಕ್ಷದ ವೆಬ್ ಸೈಟ್ ನಲ್ಲಿ ಸಂಪೂರ್ಣ ತಪ್ಪು ಮಾಹಿತಿ ನೀಡಲಾಗಿದೆ. ಆಪ್ ನೀಡಿರುವ ಕಂಪನಿಗಳು ಎಲ್ಲೂ ಚಾಲ್ತಿಯಲ್ಲೇ ಇಲ್ಲ ಎಂದು ಸ್ವಯಂ ಸೇವಕ ಮಂಚ್ ಆರೋಪಿಸಿದೆ. ಅಲ್ಲದೇ ಪ್ರತಿಯೊಂದು ನಕಲಿ ಕಂಪನಿಗಳಿಂದ ಆಪ್ ಗೆ 50 ಲಕ್ಷ ರೂಪಾಯಿ ಹಣ ಸಂದಾಯವಾಗಿದೆ ಎಂದು ಹೇಳಿದೆ. ಈ ರೀತಿ ಒಟ್ಟು 31 ಬೋಗಸ್ ಕಂಪನಿಗಳಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಆಮ್ ಆದ್ಮಿ ಪಕ್ಷ ಹಣ ಸಂಗ್ರಹಿಸಿದೆ. ಅಲ್ಲದೇ ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ನೀಡುವುದಕ್ಕೂ ಕೆಲವೇ ದಿನಗಳ ಮುನ್ನ ಈ ಕಂಪನಿಗಳ ಖಾತೆಗೆ ಹಣ ವರ್ಗಾವಣೆಯಾಗಿರುವ ಮಾಹಿತಿಯೂ ಹೊರಬಿದ್ದಿದೆ.
ಆಪ್ ಪಕ್ಷಕ್ಕೆ ಸಂದಾಯವಾಗಿರುವ ದೇಣಿಗೆ ಬಗ್ಗೆ ತನಿಖೆ ನಡೆಸಿ, ದೇಣಿಗೆ ಸಂಗ್ರಹದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲು ಮಾಡಬೇಕೆಂದು ಎವಿಎಎಂ ಒತ್ತಾಯಿಸಿದ್ದಾರೆ.