ನವದೆಹಲಿ : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಿರಣ್ ಬೇಡಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನರೇಂದ್ರ ಟಂಡನ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಫೆ.7ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಕೆಲ ದಿನಗಳ ಮೊದಲು ನರೇಂದ್ರ ಟಂಡನ್ ಬಿಜೆಪಿಗೆ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಟಂಡನ್, ಕಿರಣ್ ಬೇಡಿಯವರ ಕಾರ್ಯಕ್ರಮ ಸಂಯೋಜಕರಾಗಿದ್ದರು. ಅಲ್ಲದೇ ದೆಹಲಿ ಬಿಜೆಪಿ ಘಟಕದ ಕಾರ್ಯಕಾರಿಣಿ ಸದಸ್ಯರೂ ಆಗಿದ್ದರು.
ಕಿರಣ್ ಬೇಡಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಎಲ್ಲರ ಮೇಲೂ ಅಧಿಕಾರ ಚಲಾಯಿಸುತ್ತಿದ್ದಾರೆ. ಪಕ್ಷದ ಯಾವೊಬ್ಬ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ನರೇಂದ್ರ ಟಂಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ನಾಯಕರು ಗಮನಹರಿಸಬೇಕು ಎಂದು ತಿಳಿಸಿದ್ದಾರೆ.
ಕಿರಣ್ ಬೇಡಿಯವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ದೆಹಲಿ ಬಿಜೆಪಿ ಘಟಕದಲ್ಲಿ ಬಂಡಾಯ ಆರಂಭವಾಗಿತ್ತಾದರೂ ಯಾರೂ ಬಹಿರಂಗವಾಗಿ ತೋರ್ಪಡಿಸಿರಲಿಲ್ಲ. ಆದರೆ ಈಗ ನರೇಂದ್ರ ಟಂಡನ್ ಬೇಡಿ ವಿರುದ್ಧ ಅಸಮಾಧನ ಹೊರಹಾಕುವ ಮೂಲಕ ಬಿಜೆಪಿಯ ಎಲ್ಲಾ ಹುದ್ದೆಗೂ ರಾಜೀನಾಮೆ ನೀಡಿದ್ದಾರೆ.