ನವದೆಹಲಿ : ಗಡಿ ವಿವಾದ ಸೇರಿದಂತೆ ಚೀನಾದೊಂದಿಗಿನ ಎಲ್ಲಾ ತಕರಾರುಗಳನ್ನೂ ಬಗೆಹರಿಸಲು ಭಾರತ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದು ಮಾತುಕತೆಗೆ ಚೀನಾ ಮುಂದಾಗಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಗಡಿ ಸುರಕ್ಷಾ ಪಡೆಯಾಗಿರುವ ಐಟಿಬಿಪಿಯ ಬೆಟಾಲಿಯನ್ ಕ್ಯಾಂಪ್ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ನಡುವೆ ಸೂಕ್ಷ್ಮ ಭಿನ್ನಾಭಿಪ್ರಾಯಗಳಿವೆ. ಉಭಯ ದೇಶಗಳ ನಡುವಣ ಗಡಿ ವಿವಾದವನ್ನು ಬಗೆಹರಿಸಲು ಭಾರತ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಿದೆ. ಚೀನದೊಂದಿಗಿನ ಎಲ್ಲಾ ತಕರಾರುಗಳನ್ನೂ ಸೌಹಾರ್ದಯುತವಾಗಿ ಬಗೆಹರಿಸಲು ಭಾರತ ಉತ್ಸುಕವಾಗಿದ್ದು ಚೀನಾ ಮಾತುಕತೆಗೆ ಮುಂದಾಗಬೇಕು ಎಂದು ಹೇಳಿದರು.
ತನ್ನ ಭೂಪ್ರದೇಶವನ್ನು ವಿಸ್ತರಿಸಿಕೊಳ್ಳುವ ಯಾವುದೇ ಉದ್ದೇಶವನ್ನು ಭಾರತ ಹೊಂದಿಲ್ಲ. ಆದರೆ ಭಾರತದ ಭೂಭಾಗವನ್ನು ಆಕ್ರಮಿಸಲು ಇತರರಿಗೆ ಅವಕಾಶವನ್ನು ನೀಡಲಾಗದು. ಭಾರತ ಈ ಹಿಂದಿನಿಂದಲೂ ಶಾಂತಿಯನ್ನು ಪ್ರತಿಪಾದಿಸುತ್ತಾ ಬಂದಿದ್ದು ಯಾವ ದೇಶದ ಮೇಲೂ ಆಕ್ರಮಣ ನಡೆಸಿಲ್ಲ. ಚೀನ ಈ ವಿಚಾರವನ್ನು ಮನಗಂಡು ಎಲ್ಲಾ ವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಭಾರತದ ಪ್ರಾಮಾಣಿಕ ಪ್ರಯತ್ನದಲ್ಲಿ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇದೇವೇಳೆ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಗೆ ಗಡಿಭಾಗದಲ್ಲಿ ಹೊಸದಾಗಿ 35 ಗಡಿ ಠಾಣೆಗಳನ್ನು ಸ್ಥಾಪಿಸಲು ಗೃಹ ಖಾತೆ ಈಗಾಗಲೇ ತನ್ನ ಒಪ್ಪಿಗೆಯನ್ನು ನೀಡಿದೆ. ಇದರಲ್ಲಿ 22ಠಾಣೆಗಳು ಈಗಾಗಲೇ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿವೆ. ಉಳಿದ 13 ಠಾಣೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಐಟಿಬಿಪಿ ಯೋಧರ ಸಂಚಾರಕ್ಕಾಗಿ ಗಡಿಭಾಗದಲ್ಲಿ ಹೊಸದಾಗಿ 34 ರಸ್ತೆಗಳನ್ನು ನಿರ್ಮಿಸಲು ಒಪ್ಪಿಗೆ ನೀಡಲಾಗಿದ್ದು ಇದರಲ್ಲಿ 27 ರಸ್ತೆಗಳ ನಿರ್ಮಾಣ ಕಾಮಗಾರಿ ಚಾಲನೆಯಲ್ಲಿದೆ. ಅಲ್ಲದೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು 123 ಮೊಬೈಲ್ ಟವರ್ಗಳನ್ನು ನಿರ್ಮಿಸಲು ಗೃಹ ಖಾತೆ ಅನುಮತಿಯನ್ನು ನೀಡಿದೆ ಎಂದರು.