ನವದೆಹಲಿ : 'ಗಣರಾಜ್ಯೋತ್ಸ'ವದ ವೇಳೆ ಉಪರಾಷ್ಟ್ರಪತಿಗಳು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂಬ ವರದಿಗಳಿಗೆ ಹಮೀದ್ ಅನ್ಸಾರಿ ಪ್ರತಿಕ್ರಿಯಿಸಿದ್ದು, ತಾವು ರಾಷ್ಟ್ರಗೀತೆ ಹಾಡುವ ವೇಳೆ ಶಿಷ್ಟಾಚಾರ ಪಾಲಿಸಿರುವುದಾಗಿ ತಿಳಿಸಿದ್ದಾರೆ.
ಧ್ವಜಾರೋಹಣ ಅಥವಾ ರಾಷ್ಟ್ರಗೀತೆಯನ್ನು ಹಾಡುವ ವೇಳೆ ಉಪರಾಷ್ಟ್ರಪತಿಗಳು ಎದ್ದುನಿಂತು ಗೌರವ ಸೂಚಿಸುವುದು ಶಿಷ್ಟಾಚಾರ ಅದನ್ನು ಪಾಲಿಸಿರುವುದಾಗಿ ಹಮೀದ್ ಅನ್ಸಾರಿ ಸ್ಪಷ್ಟಪಡಿಸಿದ್ದಾರೆ. ಸಮವಸ್ತ್ರದಲ್ಲಿರುವ ಅಧಿಕಾರಿಗಳು ಧ್ವಜಾರೋಹಣದ ವೇಳೆ ಸೆಲ್ಯೂಟ್ ಮಾಡಬೇಕು ಮತ್ತು ಸಾಮಾನ್ಯ ಉಡುಗೆಯಲ್ಲಿರುವವರು ಎದ್ದು ನಿಂತು ಗೌರವ ಸಲ್ಲಿಸಬೇಕು, ತಾವು ಸಾಮಾನ್ಯ ಉಡುಗೆಯಲ್ಲಿದ್ದ ಕಾರಣ ಎದ್ದು ನಿಂತು ಗೌರವ ಸಲ್ಲಿಸಿರುವುದಾಗಿ ಹಮೀದ್ ಅನ್ಸಾರಿ ತಿಳಿಸಿದ್ದಾರೆ.
ಇದೇ ವೇಳೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಉಪರಾಷ್ಟ್ರಪತಿಗಳ ವಿಶೇಷ ಅಧಿಕಾರಿ ರಾಜ್ಯಸಭಾ ಟಿವಿ ಸಂಪಾದಕರಾದ ಗುರುದೀಪ್ ಸಿಂಗ್, ಗಣರಾಜ್ಯೋತ್ಸವ ದಿನದಂದು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಯಾವುದೇ ರೀತಿಯಲ್ಲಿಯೂ ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ ಎಂದಿದ್ದಾರೆ.
ನವದೆಹಲಿಯ ರಾಜ್ ಪಥ್ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣದ ವೇಳೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೆಲ್ಯೂಟ್ ಮಾಡಿರಲಿಲ್ಲ. ಈ ಚಿತ್ರಗಳು ಸಾಮಾಜಿಕ ಫೇಸ್ ಬುಕ್ ಹಾಗೂ ಇತರ ಜಾಲತಾಣಗಳಲ್ಲಿ ತೀವ್ರ ಚರ್ಚೆಗೊಳಗಾಗಿತ್ತು.