ಬೆಂಗಳೂರು : ಭಾರತದ ಮುಂದಿನ ಭವಿಷ್ಯ ವಿಜ್ಞಾನಕ್ಕೆ ಮೀಸಲಿದ್ದು ಈ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಹಾಗೂ ಬೆಳವಣಿಗೆ ನಡೆಯಬೇಕಿದೆ ಎಂದು ಭಾರತದ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ತಿಳಿಸಿದ್ದಾರೆ.
ಜವಾಹರ್ಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವಿಧ ದೇಶಗಳು ತಂತ್ರಜ್ಞಾನದಲ್ಲಿ ಭಾರತಕ್ಕಿಂತ ಮುಂದಿದೆ. ಇಲ್ಲಿನ ಕೈಗಾರಿಕೆ ಇನ್ನೂ ಹೆಚ್ಚು ಅಭಿವೃಧ್ಧಿ ಹೊಂದಬೇಕಿದೆ ಎಂದರು.
ಭಾರತದ ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ತಿಳಿಸಿದಂತೆ ಯಾವಾಗ ವಿಜ್ಞಾನವು ಬಡತನ ನಿರ್ಮೂಲನೆ, ಜನರ ಜೀವನ ಮಟ್ಟ ಸುಧಾರಣೆ ಮಾಡುತ್ತದೆಯೋ ಆಗ ದೇಶ ಮುನ್ನಡೆಯುತ್ತದೆ. ನಾವು ವಿಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಸ್ವರ್ಧಿಸಬೇಕು. ಇಂದಿನ ಯುವ ಜನರಲ್ಲಿ ವಿಜ್ಞಾನದಲ್ಲಿ ಹೆಚ್ಚಿನ ಉದ್ಯೋಗವಕಾಶ ಸಿಗಬೇಕು ಹಾಗೂ ಹೆಚ್ಚು ಸಂಶೋಧನೆ ನಡೆಯಬೇಕು. ಭಾರತದ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿ ಜಗತ್ತಿನ 50 ಉತ್ತಮ ಸಂಸ್ಥೆಗಳಲ್ಲಿ ಸ್ಥಾನ ಪಡೆಯಬೇಕು ಎಂದರು.
ಕರ್ನಾಟಕ ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ಅವರು ಮಾತನಾಡಿ ವಿಜ್ಞಾನವು ಪ್ರತಿದಿನ ಬೆಳವಣಿಗೆ ಹೊಂದುತ್ತಿದೆ. ಇಸ್ರೋ ವಿಜ್ಞಾನಿಗಳು ಕಳೆದ ವರ್ಷ ಮಂಗಳಯಾನವನ್ನು ಯಶಸ್ವಿಯಾಗಿ ನಡೆಸಿದರು. ಇಂದು ಮಹಿಳೆಯರು ಸಹಾ ಹೆಚ್ಚು ಬುದ್ದಿವಂತಿಕೆ ಹಾಗೂ ಸಮರ್ಥರಾಗಿ ವಿಜ್ಞಾನದ ವಿಷಯದಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವು ಸೌರಶಕ್ತಿ, ತ್ಯಾಜ್ಯ ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ವಿಷಯಗಳಲ್ಲಿ ಹೆಚ್ಚು ಸಾಧನೆ ಮಾಡಿದೆ. ನ್ಯಾನೊ ತಂತ್ರಜ್ಞಾನಕ್ಕೆ ಇಂದು ಪ್ರಾಮುಖ್ಯತೆ ನೀಡಲಾಗಿದೆ. ಭಾರತ ರತ್ನ ಸಿ. ಎನ್.ಆರ್. ಅವರು ಜವಹರ್ಲಾಲ್ ಸಂಶೋಧನಾ ಕೇಂದ್ರವನ್ನು ವಿಶ್ವ ಮಟ್ಟದಲ್ಲಿ ಗುರುತಿಸಲು ಶ್ರಮಿಸಿದ್ದಾರೆ ಎಂದರು. ಅವರು ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.