ಬೆಂಗಳೂರು : ಒಂದು ದೇಶದ ಭವಿಷ್ಯದ ಅಡಿಪಾಯವೆಂದರೆ ಅಲ್ಲಿನ ಯುವ ಜನತೆ. ಹಾಗಾಗಿ ಯುವ ಜನತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ದೇಶಕ್ಕೆ ಸಲ್ಲಿಸುವ ಅತಿ ದೊಡ್ಡ ಸೇವೆ ಎಂದು ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2011 ರಲ್ಲಿ ಭಾರತದ ಜನಸಂಖ್ಯೆಯ ಶೇ. 50ರಷ್ಟು ಜನ 24 ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. 2020 ರ ವೇಳೆಗೆ ನಮ್ಮ ಜನಸಂಖ್ಯೆಯ ಮೂರನೇ ಎರಡು ಭಾಗ ದುಡಿಮೆ ಮಾಡುವ ವಯಸ್ಸಿನದ್ದಾಗಿರುತ್ತದೆ. ಈ ಜನಸಂಖ್ಯಾ ಲಾಭವನ್ನು ಸೂಕ್ತವಾಗಿ ಬಳಸಿಕೊಳ್ಳಲು ಎರಡು ಪ್ರಮುಖ ಕೆಲಸಗಳನ್ನು ಮಾಡಬೇಕಿದೆ. ಒಂದು ಆರೋಗ್ಯ, ಶಿಕ್ಷಣ ಹಾಗೂ ಕೌಶಲ ಕ್ಷೇತ್ರಗಳಲ್ಲಿ ಸಾಧನೆ ಹಾಗೂ ಮತ್ತೊಂದು ಯುವ ಜನತೆಯ ಆಶೋತ್ತರಗಳನ್ನು ಈಡೇರಿಸುವಂತಹ ಅವಕಾಶಗಳ ನಿರ್ಮಾಣವಾಗಬೇಕಿದೆ ಎಂದರು.
ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ರಂಗವು ಲಭ್ಯತೆ, ಸಮತೆ ಮತ್ತು ಗುಣಮಟ್ಟದ ಸಮಸ್ಯೆಗಳಿಂದ ಬಳಲುತ್ತಿದೆ. ಮಹಿಳೆಯರು ಹಾಗೂ ದುರ್ಬಲ ವರ್ಗದವರು ಉನ್ನತ ಶಿಕ್ಷಣ ಕ್ಷೇತ್ರದಿಂದ ಇನ್ನೂ ವಂಚಿತರಾಗಿದ್ದಾರೆ. ಅಲ್ಲದೆ ಈ ಕ್ಷೇತ್ರದಲ್ಲಿ ತರಬೇತಾದ ಶಿಕ್ಷಕರ ಕೊರತೆಯಿದೆ. ಮೂಲ ಸೌಕರ್ಯದ ಕೊರತೆ ಹಳೆಯ ಅರ್ಥ ರಹಿತ ಪಠ್ಯಕ್ರಮದ ಸಮಸ್ಯೆಗಳಿವೆ. ಅಂತಾರಾಷ್ಟ್ರೀಯ ಶಿಕ್ಷಣ ಗುಣಮಟ್ಟಕ್ಕೆ ಹೋಲಿಸಿದಾಗ ನಾವು ಬಹಳ ಹಿಂದುಳಿದಿದ್ದೇವೆ ಎಂದ ಅವರು, ಉನ್ನತ ಶಿಕ್ಷಣ ದೇಶದ ಅಗತ್ಯತೆಗಳನ್ನು ಪೂರೈಸುವಂತಿರಬೇಕು. ಉದ್ಯೋಗದ ಮಾರುಕಟ್ಟೆಯತ್ತ ಗಮನವಿರಬೇಕು. ಜತೆಗೆ ಸ್ವಂತ ಉದ್ಯೋಗಕ್ಕೂ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಪ್ರತಿ ವರ್ಷ ಏಳು ಲಕ್ಷ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವೀಧರರನ್ನು ತಯಾರು ಮಾಡುತ್ತಿದ್ದೇವೆ. ಆದರೆ ಕೇವಲ 25% ಮಾತ್ರ ಉದ್ಯೋಗಕ್ಕೆ ಅರ್ಹರು ಎಂದು ಉದ್ದಿಮೆ ಕ್ಷೇತ್ರ ಹೇಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ದೌಡಾಯಿಸುತ್ತಿದ್ದಾರೆ. ಇದರಿಂದ ಕಾಲೇಜುಗಳು ವಿಶ್ವವಿದ್ಯಾನಿಲಯಗಳು ತುಂಬಿ ತುಳುಕುತ್ತಿದೆ. ಮೂಲ ಸೌಕರ್ಯಗಳ ಲಭ್ಯತೆ ಕೊರತೆಯಿದೆ. ಈ ಬಗ್ಗೆ ಸರ್ಕಾರ, ಖಾಸಗಿ, ನಾಗರಿಕ ಸಮಾಜ, ಎಲ್ಲ ಸೇರಿ ಕೆಲಸ ಮಾಡಬೇಕಿದೆ ಎಂದು ಉಪರಾಷ್ಟ್ರಪತಿಗಳು ಆಗ್ರಹಿಸಿದರು.