ನವದೆಹಲಿ : ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಸಿಬಿಐ, ಮಂಗಳವಾರ ಮುಚ್ಚಿದ ಲಕೋಟೆಯಲ್ಲಿ ಇರಿಸಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಕೈಗಾರಿಕೋದ್ಯಮಿ ಕುಮಾರ ಮಂಗಲಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ.ಪಾರೇಖ್ ಮತ್ತು ಇತರ ಕೆಲವರನ್ನು ಒಳಗೊಂಡ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿಸ್ತೃತ ತನಿಖೆಯ ಅಂಗವಾಗಿ ತಾನು ಅನೇಕ ವ್ಯಕ್ತಿಗಳನ್ನು ಭೇಟಿಯಾಗಿ ಅವರ ಹೇಳಿಕೆಗಳನ್ನು ಪಡೆದುಕೊಳ್ಳಲಿದ್ದು ಅಲ್ಲಿಯ ತನಕ ಈ ಮುಚ್ಚಿದ ಲಕೋಟೆಯನ್ನು ತೆರೆಯಬಾರದೆಂದು ಸಿಬಿಐ, ವಿಶೇಷ ನ್ಯಾಯಾಲಯವನ್ನು ಕೋರಿದೆ.
ಕಲ್ಲಿದ್ದಲು ಹಗರಣ ತನಿಖೆಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಸಲ್ಲಿಸುವಂತೆ 2014ರ ಡಿಸೆಂಬರ್ 16ರಂದು ನ್ಯಾಯಾಯ ಸಿಬಿಐಗೆ ಆದೇಶಿಸಿತ್ತು. ಆ ಆದೇಶದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹಾಗೂ ಉನ್ನತ ಪಿಎಂಓ ಅಧಿಕಾರಿಗಳನ್ನು ಪ್ರಶ್ನಿಸುವಂತೆ ಸೂಚಿಸಿತ್ತು.
ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಕೆ.ಶರ್ಮಾ ಅವರು ಪ್ರಗತಿ ವರದಿಯನ್ನು ಕೋರ್ಟಿಗೆ ಸಲ್ಲಿಸಿದ್ದಾರೆ. ಈ ಮೂಲಕ ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶ ಭರತ್ ಪರಾಶರ್ ಅವರು ಡಿ.16ರಂದು ಹೊರಡಿಸಿದ್ದ ಆದೇಶವನ್ನು ಸಿಬಿಐ ಪಾಲಿಸಿದಂತಾಗಿದೆ ಎಂದು ಹೇಳಿದ್ದಾರೆ.