ನವದೆಹಲಿ : ವಿದೇಶಿ ಬ್ಯಾಂಕುಗಳಲ್ಲಿ ತೆರಿಗೆ ವಂಚನೆಯ ಹಣವನ್ನು ಠೇವಣಿ ಇರಿಸಿರುವ ಕಪ್ಪುಹಣ ಪ್ರಕರಣಗಳ ತನಿಖೆಯ ಪ್ರಗತಿ ವರದಿಯನ್ನು ಮೇ 12ರಂದು ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುಖ್ಯನ್ಯಾಯಮೂರ್ತಿ ಹೆಚ್.ಎಲ್.ದತ್ತು, ನ್ಯಾಯಮೂರ್ತಿ ಮದನ್ ಬಿ ಲೋಕುರ್, ಎಕೆ ಸಿಕ್ರಿ ಅವರನ್ನೊಳಗೊಂಡ ನ್ಯಾಯಪೀಠ, ಮೇ 12ರೊಳಗೆ ಕಾರ್ಯಪ್ರಗತಿಯ ಹೊಸ ವರದಿಯನ್ನು ಸಲ್ಲಿಸಲು ಸೂಚಿಸಿ ಎಂದು ವಿಶೇಷ ತನಿಖಾ ತಂಡದ ಪರ ಹಾಜರಾಗಿದ್ದ ಹಿರಿಯ ವಕೀಲ ಸೋಲಿ ಸೊರಾಬ್ಜಿ ಅವರಿಗೆ ಹೇಳಿತು. ಬೇಸಿಗೆ ರಜೆಗೆ ಮುನ್ನ ಆ ವರದಿಯನ್ನು ನಾವು ಅವಲೋಕಿಸಬೇಕಿದೆ ಎಂದು ತಿಳಿಸಿತು.
ಈ ಮಧ್ಯೆ ಬಿಜೆಪಿ ಸಂಸದ ರಾಮ್ ಜೇಠ್ಮಲಾನಿ ಅವರು ''ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಪ್ಪುಹಣವನ್ನು ಸ್ವದೇಶಕ್ಕೆ ವಾಪಸ್ ತರುವ ಬಗ್ಗೆ ಆಸಕ್ತಿ ತೋರುತ್ತಿಲ್ಲ. ನಾನು ಜರ್ಮನಿಗೆ ಹೋಗಿದ್ದ ವೇಳೆ ಅಲ್ಲಿ ಒಂದಷ್ಟು ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದೆ. ಆಗ ಅವರು ಮೋದಿ ಸರ್ಕಾರ ಈ ಸಂಬಂಧ ತಮ್ಮ ದೇಶದ ಬ್ಯಾಂಕುಗಳು ಹಾಗೂ ತನಿಖಾ ಸಂಸ್ಥೆಗಳ ಜತೆ ಸಂವಹನ ನಡೆಸಿಲ್ಲ ಎಂದು ಹೇಳಿದ್ದಾರೆ. ಇದೆಲ್ಲವನ್ನೂ ನೋಡಿದರೆ ಕಪ್ಪುಹಣ ವಾಪಸಾತಿ ಬಗ್ಗೆ ವಿತ್ತ ಸಚಿವರು ಗಂಭೀರ ಪ್ರಯತ್ನ ನಡೆಸುತ್ತಿಲ್ಲ ಎಂಬುದು ದಿಟ,'' ಎಂದು ಆರೋಪಿಸಿದ್ದಾರೆ.