ಬೆಂಗಳೂರು : ಕಾನೂನು ಜಾರಿಗೆ ತರುವುದಕ್ಕಿಂತ ಮುಖ್ಯವಾಗಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತಿ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಕಂದಾಯ ಭವನದಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮದಡಿಯಲ್ಲಿ ನೂತನವಾಗಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಟ್ಟು 1.23 ಲಕ್ಷ ಎಕರೆ ಸರಕಾರಿ ಜಮೀನಿದ್ದು ಅದರಲ್ಲಿ 34,111 ಎಕರೆ ಜಮೀನು ಒತ್ತುವರಿಯಾಗಿದೆ ಎಂದು 2007ರ ವರದಿಯಲ್ಲಿ ತಿಳಿಸಲಾಗಿತ್ತು, ಇದರಲ್ಲಿ ಉದ್ಯಾನವನ ಮತ್ತು ಸಾರ್ವಜನಿಕ ಉಪಯೋಗಿ ಸ್ಥಳಗಳು ಸೇರಿದಂತೆ 16,596 ಎಕರೆ ಭೂಮಿಯನ್ನು ತೆರವುಗೊಳಿಸಲು ಸಾದ್ಯವಿಲ್ಲ. ಉಳಿದ 17515 ಎಕರೆ ಅತಿಕ್ರಮಣವಾಗಿತ್ತು ಅದರಲ್ಲಿ 15641 ಎಕರೆ ಭೂಮಿಯನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ, ಅದರಲ್ಲಿ ವಿಶೇಷವಾಗಿ ತಮ್ಮ ಅಧಿಕಾರಾವಧಿಯಲ್ಲಿ 6,000 ಎಕರೆ ಸರಕಾರಿ ಭೂಮಿಯನ್ನು ತೆರವುಗೊಳಿಸಿದ ತೃಪ್ತಿ ತಮಗಿದೆ ಎಂದರು.
ಅತಿಕ್ರಮಣಕಾರರು ಬಲಿಷ್ಟರಾಗಿದ್ದು, ಅವರು ಯಾರನ್ನು ಬೇಕಾದರು ತಮ್ಮ ಶ್ರೀಮಂತಿಕೆಯಿಂದ ಕೊಂಡುಕೊಳ್ಳಬಲ್ಲರು, ಸರಕಾರಿ ಜಮೀನುಗಳನ್ನು ಕಬಳಿಸಲು ಸಾದ್ಯವಿಲ್ಲ ಹಾಗಾಗಿ ಇಂತಹವರ ಆಮಿಷಗಳಿಗೆ ಸರಕಾರಿ ನೌಕರರು ಬಲಿಯಾಗಬಾರದು, ಈಗಾಗಲೇ ನಮ್ಮಲ್ಲಿ ಅನೇಕ ಕಾನೂನುಗಳಿದ್ದು ಸಹ ಇಂತಹ ಪ್ರಕರಣಗಳು ನಡೆಯುತ್ತಿವೆ ಎಂದರೆ ಇದು ನಮ್ಮ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇವುಗಳನ್ನೆಲ್ಲಾ ಪರಿಶೀಲಿಸಿ ಪರಿಣಾಮಕಾರಿಯಾದ ಕಾನೂನು ಮತ್ತು ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ, ಇವುಗಳು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಅತಿಕ್ರಮದಲ್ಲಿ ಭಾಗಿಯಾದವರನ್ನು ಶಿಕ್ಷಿಸಿ ಉಳಿದ ಅತಿಕ್ರಮಗಾರರಿಗೆ ಸಂದೇಶ ರವಾನಿಸುವ ಕೆಲಸ ತ್ವರಿಗತಿಯಲ್ಲಿ ಆಗಬೇಕು ಎಂದು ಹೇಳಿದರು.
ಈ ನ್ಯಾಯಾಲಯದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಒಟ್ಟು ಐದು ಜನರ ಸಮಿತಿಯಿದ್ದು ಅದರ ಅಧ್ಯಕ್ಷರಾಗಿ ನಿವೃತ್ತ ನ್ಯಾಯಧೀಶರಾದ ಎಚ್. ಎನ್ ನಾರಾಯಣ್ ಅವರು ಕಾರ್ಯನಿರ್ವಹಿಸಲಿದ್ದಾರೆ, ಈಗಾಗಲೇ ಕೆಲವರಲ್ಲಿ ಭಯ ಶುರುವಾಗಿದ್ದು ಅವರಿಗೆ ನಡುಕ ಹುಟ್ಟಿಸುವ ರೀತಿ ಸಂದೇಶಗಳನ್ನು ರವಾನಿಸುವ ಜವಬ್ಧಾರಿ ಈ ನ್ಯಾಯಾಲಯಕ್ಕೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ ನ್ಯಾಯಾಲಯ ಸ್ಥಾಪಿಸುವುದಕ್ಕಿಂತ ಮುಖ್ಯವಾಗಿ ಅದರ ಅನುಷ್ಠಾನ ಅತಿಮುಖ್ಯ, ಈ ನ್ಯಾಯಾಲಯದ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದ್ದು ಆದಷ್ಟು ತ್ವರಿತವಾಗಿ ಒತ್ತುವರಿಗೆ ಸಂಬಂದಿಸಿದ ವ್ಯಾಜ್ಯಗಳನ್ನು ಪರಿಹರಿಸಿ ಅಪರಾಧಿಗಳನ್ನು ಶಿಕ್ಷಗೆ ಒಳಪಡಿಸಬೇಕು, ಈ ನ್ಯಾಯಾಲಯ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಮತ್ತಷ್ಟು ಅಧಿಕಾರಿಗಳ ಮತ್ತು ಸಿಬ್ಬಂಧಿಯ ಅವಶ್ಯಕತೆ ಇದೆ ಎಂದು ಹೇಳಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ ಜಯಚಂದ್ರ ಅವರು ಕಾನೂನು ಸಚಿವನಾಗಿ ಇಂದು ನಾನು ಅತ್ಯಂತ ಸಂಭ್ರಮ ಪಡುವ ಕ್ಷಣ, ಇವತ್ತಿನಿಂದ ಹೊಸ ಕಾನೂನು ಜಾರಿಯಾಗಿದೆ, ಅಕ್ರಮ ಆಸ್ತಿವಂತರ ಅಟ್ಟಹಾಸ ಹೆಚ್ಚಾಗಿದೆ, ಸಾವಿರಾರು ಎಕ್ಕರೆ ಸರಕಾರಿ ಭೂಮಿಯನ್ನು ಮರಳಿ ಪಡೆಯಲು ಮುಖ್ಯಮಂತ್ರಿಯವರು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದರ ಮೂಲಕ ದಿಟ್ಟತನ ಮೆರೆದಿದ್ದಾರೆ, ಹಿಂದಿನ ಯಾವ ಮುಖ್ಯಮಂತ್ರಿ ಮಾಡಲಾರದ್ದನ್ನು ಸಿದ್ದರಾಮಯ್ಯ ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.
ನ್ಯಾಯಾಲಯದ ವ್ಯಾಪ್ತಿ ರಾಜ್ಯಮಟ್ಟಕ್ಕಿದ್ದು ಅದರಲ್ಲಿ ಮುಖ್ಯವಾಗಿ ನಗರ ಸ್ಥಾನಗಳಲ್ಲಿ ನಡೆದಿರುವ ಅತಿಕ್ರಮಣಗಳ ಒತ್ತನ್ನು ನೀಡಬೇಕು, ಮುಂದಿನ 3 ತಿಂಗಳಲ್ಲಿ ಈ ನ್ಯಾಯಾಲಯದ ಮುಖಾಂತರ 500ಕ್ಕೂ ಹೆಚ್ಚು ಕೇಸುಗಳನ್ನು ಬಗೆಹರಿಸುವಂತಾಗಬೇಕು ಎಂದರು.