ನವದೆಹಲಿ : ನಿರೀಕ್ಷೆಯಂತೆಯೇ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಹೆಸರನ್ನು ರಾತ್ರಿ ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಪಕ್ಷದ ಸಂಸದೀಯ ಮತ್ತು ಚುನಾವಣಾ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಸಭೆಯ ಬಳಿಕ ಈ ವಿಷಯ ಪ್ರಕಟಿಸಿದ್ದಾರೆ.
ಕಿರಣ್ ಬೇಡಿ ನೇತೃತ್ವದಲ್ಲಿ ಪಕ್ಷವು ಚುನಾವಣೆ ಎದುರಿಸಲಿದೆ. ಅವರೇ ಪಕ್ಷದ ಸಿಎಂ ಅಭ್ಯರ್ಥಿ. ಕೃಷ್ಣಾನಗರ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು ಶಾ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜ್ಯದಲ್ಲೂ ಬಿಜೆಪಿ, ಚುನಾವಣೆಗೂ ಮುನ್ನ ತನ್ನ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದ ಉದಾಹರಣೆ ಇರಲಿಲ್ಲ. ಪಕ್ಷ ಸೇರಿದ ನಾಲ್ಕೇ ದಿನಗಳಲ್ಲಿ ಬೇಡಿ ಅವರನ್ನು ಇಷ್ಟು ಮಹತ್ವದ ಹುದ್ದೆಗೆ ಏರಿಸುವ ಪಕ್ಷದ ನಿರ್ಧಾರ, ಪಕ್ಷದ ಹಲವು ಹಿರಿಯ ನಾಯಕರಿಗೇ ಅಚ್ಚರಿ ತಂದಿದೆ.