ನವದೆಹಲಿ : ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆಯನ್ನು ಜೆಡಿಯು, ಆರ್.ಜೆ.ಡಿ ಮೈತ್ರಿಯಲ್ಲಿ ಎದುರಿಸಲಾಗುವುದು. ಅಲ್ಲದೇ ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ ಎಂದು ಎಸ್.ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಘೋಷಿಸಿದ್ದಾರೆ. ಈ ಮೂಲಕ ಎರಡೂ ಪಕ್ಷಗಳ ನಡುವೆ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಂತಾಗಿದೆ.
ಜೆಡಿಯು, ಆರ್ ಜೆಡಿ ಮೈತ್ರಿಯಲ್ಲಿ ಜೊತೆ ಕಾಂಗ್ರೆಸ್ ಕೂಡಾ ನಮ್ಮ ಜೊತೆ ಕೈಜೋಡಿಸಲಿದೆ ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಲಾಯಂ ಸಿಂಗ್ ಯಾದವ್ ಸುದ್ದಿಗೋಷ್ಠಿಗೂ ಮೊದಲು ತಿಳಿಸಿದ್ದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ನಾನು ದೆಹಲಿಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ಸೀಟು ಹಂಚಿಕೆ ಕುರಿತಂತೆಯೂ ಮಾತುಕತೆ ನಡೆಸಲಾಗಿದೆ ಎಂದರು. ಹಾಗಾಗಿ ನಾಳೆ ಸೀಟು ಹಂಚಿಕೆ ಬಗ್ಗೆ ಆರ್.ಜೆ.ಡಿ ಮತ್ತು ಜೆಡಿಯುನ ಮೂರು ಸದಸ್ಯರು ಸೇರಿ ಚರ್ಚೆ ನಡೆಸಲಿದ್ದಾರೆ ಎಂದು ನಿತೀಶ್ ವಿವರಿಸಿದ್ದರು.
ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಲಾಯಂ, ನಿತೀಶ್ ಕುಮಾರ್ ಸಿಎಂ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದಾಗಿ ತಿಳಿಸಿದರು. ಬಿಹಾರ ಚುನಾವಣೆಯಲ್ಲಿ ಆರ್ ಜೆಡಿ, ಜೆಡಿಯು ಮೈತ್ರಿಯಾಗಿ ಕಣಕ್ಕಿಳಿಯಲಿದೆ ಎಂದರು.