ಬೆಂಗಳೂರು : ಸಿಸಿಬಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರು ಬಾಂಬ್ ತಯಾರಿಸಿ ಸರಬರಾಜು ಮಾಡುತ್ತಿದ್ದರು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದಾರೆ.
ಬಂಧಿತ ಶಂಕಿತರು ಕಚ್ಚಾ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಅದರಲ್ಲಿ ಒಬ್ಬಾತ ಬಾಂಬ್ ತಯಾರಿಸುತ್ತಿದ್ದ. ವಿದೇಶಕ್ಕೆ ಹೋಗಿ ಬರುತ್ತಿದ್ದ, ಅಲ್ಲಿ ಸಂಘಟನೆಯೊಂದಿಗೆ ಸಭೆ ನಡೆಸುತ್ತಿದ್ದ. ಎಂಬ ಅಂಶವೂ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಬೇರೆ ಬೇರೆ ಕಡೆಯಿಂದ ಸ್ಫೋಟಕ ವಸ್ತುಗಳನ್ನು ತರುವುದು, ಸರಬರಾಜುಮಾಡಿ, ಸ್ಫೋಟಿಸಿರುವುದು ಬೆಳಕಿಗೆ ಬಂದಿದೆ. ಶಂಕಿತ ಉಗ್ರರ ಬಂಧನದ ವೇಳೆ ಸಿಕ್ಕ ಸ್ಫೋಟಕಕ್ಕೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಾಂಬ್ ಸ್ಫೋಟಕಗಳಿಗೂ ಸಾಮ್ಯತೆಯಿದೆ. ಕೇವಲ ಸ್ಫೋಟಕ ಸಿಕ್ಕಿದೆ ಎಂದು ಬಂಧಿಸಿಲ್ಲ, ಖಚಿತ ಮಾಹಿತಿ ಮೇರೆಗೆ ನಾಲ್ವರನ್ನೂ ಬಂಧಿಸಲಾಗಿದೆ. ವಿಶೇಷ ತನಿಖಾ ತಂಡದಿಂದ್ದ ವಿಚಾರಣೆ ಮುಂದುವರೆದಿದೆ. ಬಂಧಿತರು ಒಂದೊಂದು ಉಗ್ರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಎಂದು ತಿಳಿಸಿದರು.
ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಸ್ಫೋಟಕವನ್ನು ಯಾರು ತಯಾರಿಸಿದ್ದರು, ಎಲ್ಲಿಂದ ರವಾನೆಯಾಗಿತ್ತೆಂದು ತಿಳಿದು ಬಂದಿರಲಿಲ್ಲ. ಆದರೆ ಈಗ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಬಂಧಿತ ನಾಲ್ವರು ಉಗ್ರರಿಗೆ ಹವಾಲಾ ಹಣ ಪೂರೈಕೆಯಾಗುತ್ತಿತ್ತು. ಆದರೆ ಎಲ್ಲಿ, ಯಾರಿಂದ ಪೂರೈಕೆಯಾಗುತ್ತಿತ್ತು ಎಂಬ ಬಗ್ಗೆ ಇನ್ನು ತಿಳಿಯಬೇಕಿದೆ ಎಂದು ವಿವರಿಸಿದರು.