BW News Bureau : ನಗರದಲ್ಲಿ ಏಪ್ರಿಲ್ 2ರಿಂದ ಮೂರು ದಿನ ನಡೆಯುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ಗಳನ್ನು ಬಳಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಉಪಲೋಕಾಯಕ್ತ ಸುಭಾಷ್ ಬಿ.ಅಡಿ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
ಹೋಟೆಲ್ ಅಶೋಕದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸುತ್ತಿದ್ದು, ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ಗಳು ರಾರಾಜಿಸಲಿವೆ. ಆದ್ದರಿಂದ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ಗಳನ್ನು ಹಾಕದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಂಗ್ಸ್ಗಳು ಹಾಕಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸ್ವತ್ಛ ಭಾರತ ಅಭಿಯಾನ'ಕ್ಕೆ ಬಿಜೆಪಿಯೇ ಕರೆ ನೀಡಿದೆ. ನಗರವನ್ನು ಸ್ವತ್ಛತೆಯಿಂದಿಡಲು ಅನಧಿಕೃತವಾದ ಫ್ಲೆಕ್ಸ್ಗಳನ್ನು ಹಾಕಬಾರದು. ಬಿಜೆಪಿ ಸರ್ಕಾರವೇ ನೀಡಿರುವ ಕರೆಗೆ ರಾಜ್ಯ ಬಿಜೆಪಿ ಮುಖಂಡರು ಕೈಜೋಡಿಸಿ ಸ್ವತ್ಛತೆ ಕಾಪಾಡಬೇಕು ಎಂದು ಸುಭಾಷ್ ಅಡಿ ಹೇಳಿದ್ದಾರೆ.