ಬೆಂಗಳೂರು : ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ನಿರ್ಮಾಣ ಮತ್ತು ಅಭಿವೃದ್ಧಿಗಳನ್ನು ಅಧಿಕೃತಗೊಳಿಸುವ ಅಕ್ರಮ-ಸಕ್ರಮ ಯೋಜನೆ ಕೊನೆಗೂ ಜಾರಿಗೆ ಬಂದಿದೆ.
ಅಕ್ರಮ-ಸಕ್ರಮ ಯೋಜನೆ ಕುರಿತಂತೆ ರಾಜ್ಯ ಸರ್ಕಾರ ಫೆ.27ರಂದು ಅಧಿಸೂಚನೆ ಹೊರಡಿಸಿದ್ದು, ಇದೀಗ ನಿಯಮಾವಳಿಗಳನ್ನು ರಚಿಸಲಾಗಿದೆ. ಮಾ.23ರಿಂದ ಅರ್ಜಿ ಸಲ್ಲಿಕೆ ಕಾರ್ಯ ಆರಂಭವಾಗಲಿದ್ದು, 2016ರ ಮಾ. 22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ವಸತಿ ಕಟ್ಟಡಗಳಾದರೆ ಶೇ.50ರಷ್ಟು ಮತ್ತು ವಸತಿಯೇತರ ಕಟ್ಟಡಗಳಾದರೆ ಶೇ. 25ರಷ್ಟು ಉಲ್ಲಂಘನೆ ಮಾಡಿದ್ದರೆ ಅವುಗಳನ್ನು ಸಕ್ರಮ ಮಾಡಿಕೊಳ್ಳಬಹುದು. ಅದೇ ರೀತಿ ಅನಧಿಕೃತ ಬಡಾವಣೆಗಳ ನಿವೇಶನಗಳನ್ನೂ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. 2013ರ ಅ. 19ರ ಮುಂಚೆ ನಿರ್ಮಾಣವಾಗಿರುವ ಕಟ್ಟಡಗಳಿಗೆ ಮಾತ್ರ ಈ ಅಕ್ರಮ-ಸಕ್ರಮ ಯೋಜನೆ ಅನ್ವಯವಾಗುತ್ತದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಅಕ್ರಮ-ಸಕ್ರಮ ಯೋಜನೆ ಜಾರಿ ಕುರಿತು ಮಾಹಿತಿ ನೀಡಿದರು. ಅಕ್ರಮ-ಸಕ್ರಮ ಯೋಜನೆಯನ್ನು ರಾಜ್ಯ ಸರ್ಕಾರ 2007ರ ಫೆ.6ರಂದೇ ಪ್ರಕಟಿಸಿ, ಅದೇ ವರ್ಷ ಆ.14ರಂದು ನಿಯಮಗಳನ್ನು ಅಂತಿಮಗೊಳಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಯೋಜನೆ ಜಾರಿಗೆ ತಡೆಯಾಜ್ಞೆ ನೀಡಿತ್ತು.
ಈ ಮಧ್ಯೆ ಯೋಜನೆಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡುವಂತೆ ಕೋರ್ಟ್ ನೀಡಿದ್ದ ಸಲಹೆಯಂತೆ ರಾಜ್ಯ ಸರ್ಕಾರ ಕ್ರಮ ಕೈಗೊಂಡು ಪ್ರಮಾಣಪತ್ರ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್ 2015ರ ಫೆ. 3ರಂದು ಅಕ್ರಮ-ಸಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿತ್ತು. ಅದರಂತೆ ಕೆಲವು ತಿದ್ದುಪಡಿಗಳೊಂದಿಗೆ ಅಕ್ರಮ-ಸಕ್ರಮ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಉಪಯೋಗಗಳ ಉಲ್ಲಂಘನೆ, ಕಟ್ಟಡಗಳ ಮಧ್ಯೆ ಜಾಗ ಬಿಡದೇ ಇರುವುದು, ಅನುಮೋದನೆ ಪಡೆದು ಉಲ್ಲಂಘನೆ ಮಾಡಿರುವುದು, ನೀಲನಕ್ಷೆ ಉಲ್ಲಂ ಸಿ ಕಟ್ಟಡ ನಿರ್ಮಾಣ ಮುಂತಾದ ಪ್ರಕರಣಗಳು ಅಕ್ರಮ-ಸಕ್ರಮ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.
ಅಕ್ರಮ-ಸಕ್ರಮ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಡೌನ್ಲೋಡ್ ಮಾಡಿ ಸಲ್ಲಿಸಬಹುದು. ಕಟ್ಟಡ ಅಥವಾ ನಿವೇಶನದ ಮಾಲಿಕರೇ ಅರ್ಜಿ ಸಲ್ಲಿಸಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ಮಾಲಿಕರೇ ಸ್ವಯಂ ಘೋಷಣೆ ಮಾಡಿಕೊಂಡು ಅರ್ಜಿಯ ಜತೆ ನಿಗದಿತ ಶುಲ್ಕ ಪಾವತಿಸಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದವರು ನೇರವಾಗಿ ಸಂಬಂಧಿಸಿದ ಕಚೇರಿಗಳಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬಹುದು. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ಆದ್ಯತೆ ಎಂಬ ನಿಯಮದಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದರು.
ಈ ರೀತಿ ಅಕ್ರಮ-ಸಕ್ರಮದ ಮೂಲಕ ಸಂಗ್ರಹವಾದ ಮೊತ್ತವನ್ನು ಪ್ರತ್ಯೇಕ ಖಾತೆಯಲ್ಲಿ ಇಡಲಾಗುವುದು. ಒಟ್ಟು ಮೊತ್ತದ ಪೈಕಿ ಶೇ. 50ರಷ್ಟನ್ನು ಉದ್ಯಾನವನ, ಖಾಲಿ ಜಾಗ ಅಭಿವೃದ್ಧಿಗೆ ಮತ್ತು ಇನ್ನುಳಿದ ಶೇ. 50ನ್ನು ನಗರ ಸ್ಥಳೀಯ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.