ಭೋಪಾಲ್ : ಐಸಿಸ್ ಉಗ್ರ ಸಂಘಟನೆ ಭಾರತದಲ್ಲೂ ಸದ್ದಿಲ್ಲದೆ ಬೇರೂರಲಾರಂಭಿಸಿರುವುದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದ ಐವರು ಶಂಕಿತ ಉಗ್ರರು, ಐಸಿಸ್ ಜತೆಗೆ ನಂಟು ಹೊಂದಿರುವ ಜಿಹಾದ್ ಸಂಘಟನೆಯೊಂದರ ಕಾರ್ಯಕರ್ತರು ಎನ್ನುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಕುತೂಹಲಕರ ಸಂಗತಿಯೆಂದರೆ ಇಂಡಿಯನ್ ಮುಜಾಹಿದ್ದೀನ್ ರೀತಿ ಐಸಿಸ್ ಉಗ್ರರಿಗೂ ಭಟ್ಕಳದ ನಂಟಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಇಮ್ರಾನ್ ಖಾನ್ ಮಹಮ್ಮದ್ ಶರೀಫ್ ಎಂಬಾತನ ನೇತೃತ್ವದ ಐವರು ಶಂಕಿತ ಉಗ್ರರನ್ನು ಮಧ್ಯಪ್ರದೇಶ ಪೊಲೀಸರು ಏ.15ರಂದು ಬಂಧಿಸಿದ್ದರು. ಬಾಂಬ್ ತಯಾರಿಸುವ ರಾಸಾಯನಿಕಗಳನ್ನು ಹೊಂದಿದ್ದ ಆರೋಪದಲ್ಲಿ ಸೆರೆಯಾಗಿದ್ದ ಖಾನ್ ಮತ್ತು ಅವನ ನಾಲ್ವರು ಸಹಚರರನ್ನು ಪೊಲೀಸರು ಆರಂಭದಲ್ಲಿ ಮಾಮೂಲು ಉಗ್ರರು ಎಂದು ಭಾವಿಸಿದ್ದರು. ಆದರೆ ವಿಚಾರಣೆ ಮುಂದುವರಿದಂತೆಲ್ಲ ಅವರು ಒಂದೊಂದೆ ಮಾಹಿತಿಯನ್ನು ಬಾಯಿ ಬಿಟ್ಟರು. ಈ ವೇಳೆ ಅವರಿಗೆ ಐಸಿಸ್ ನಂಟಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಇಮ್ರಾನ್ ಖಾನ್ ನನ್ನು ಐಸಿಸ್ ಸಂಘಟನೆ ಸೇರಿಸಿದ್ದು, ಐಸಿಸ್ ನ ಸಕ್ರಿಯ ಕಾರ್ಯಕರ್ತ ಭಟ್ಕಳ ಮೂಲದ ಮಹಮ್ಮದ್ ಶಫಿ ಅರ್ಮರ್ ಎಂಬ ವಿಷಯವೂ ವಿಚಾರಣೆ ವೇಳೆ ತಿಳಿದುಬಂದಿದೆ. ಗ್ರಾಮೀಣ ಶಿಕ್ಷಣ ಇಲಾಖೆಯ ಗುಮಾಸ್ತರೊಬ್ಬರ ಮಗನಾಗಿರುವ ಇಮ್ರಾನ್ ಖಾನ್, ಅಹ್ಲ ಅಮಲ್ ಸಫ ಎಂಬ ಮತಾಂದ ಸಂಘಟನೆಯ ಮೂಲಕ ಜಿಹಾದ್ ಸಿದ್ಧಾಂತಗಳನ್ನು ಕಲಿತಿದ್ದ. ಉದ್ಯೋಗ ಅರಸಿಕೊಂಡು ಗಲ್ಪ್ ದೇಶಗಳಿಗೆ ಹೋಗಿದ್ದ ಅವನು ಹೇಗೊ ಅರ್ಮರ್ ನ ಸಂಪರ್ಕ ಸಾಧಿಸಿ ಅವನಿಂದ ಬಾಂಬ್ ತಯಾರಿಸುವ ವಿಧಾನವನ್ನು ಕಲಿತಿದ್ದ. ಬಳಿಕ ಶಫಿ ಅರ್ಮರ್ ಅವನನ್ನು ಐಸಿಸ್ಗೆ ಸೇರಿಸಿದ. ಅನಂತರ ವಾಸಿಂ ಖಾನ್, ಮೊಹಮ್ಮದ್ ರಿಜ್ವಾನ್, ಅನ್ವರ್ ಮತ್ತು ಮಝರ್ ಎಂಬವರನ್ನು ಸೇರಿಸಿಕೊಂಡು ಖಾನ್ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.