ನವದೆಹಲಿ : ದೇಶ ಬಯಸಿದ್ದನ್ನು ದೆಹಲಿಯೂ ಬಯಸುತ್ತದೆ. ಕೇವಲ ಭಾಷಣ ಮಾಡಿದರೆ ದೇಶ ಅಭಿವೃದ್ಧಿಯಾಗುವುದಿಲ್ಲ, ಮಾತಿನ ಜತೆಗೆ ಕೃತಿಯೂ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಮ್ ಲೀಲಾ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮೂರು ರಾಜ್ಯಗಳಾದ ಜಾರ್ಖಂಡ್, ಹರ್ಯಾಣ, ಮಹಾರಾಷ್ಟ್ರದ ನೂತನ ಸಿಎಂಗಳಿಗೆ ಅಭಿನಂದನೆ ಸಲ್ಲಿಸಿದರು.
ವಂಶಪಾರಂಪರ್ಯ ಆಡಳಿತದಿಂದ ಹರ್ಯಾಣ ಮುಕ್ತವಾಗಿದೆ. ಹರ್ಯಾಣದಲ್ಲಿ ಬಿಜೆಪಿ 10 ಕ್ಷೇತ್ರಗಳನ್ನು ಗೆಲ್ಲುವುದು ಕಷ್ಟವಾಗಿತ್ತು. ಆದರೆ ಅಲ್ಲಿಯೂ ಗೆಲುವು ಸಾಧಿಸಿ ಸರ್ಕಾರ ರಚಿಸಿದ್ದೇವೆ. ಬಿಜೆಪಿ ಗೆಲುವಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಎಂದರು.
ಜಾರ್ಖಂಡ್ ನಲ್ಲಿ ಬಿಜೆಪಿ, ಬಡವರ ಭರವಸೆಯನ್ನು ಗೆದ್ದಿದೆ. ಜಮ್ಮು-ಕಾಶ್ಮೀರದಲ್ಲಿಯೂ ಬಿಜೆಪಿ ಸಾಧನೆ ಮಾಡಿದೆ. ಜಮ್ಮು-ಕಾಶ್ಮೀರ ಜನತೆಗೆ ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ಅವರು ಭಯೋತ್ಪಾದನೆ, ಆತಂಕವಾದವನ್ನು ಮೆಟ್ಟಿ ಮತದಾನ ಮಾಡಿದ್ದಾರೆ. ಇಂದು ದೇಶದ ಬಡ ಜನತೆ ಬಿಜೆಪಿಯತ್ತ ತಿರುಗಿ ನೋಡುತ್ತಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ನಾವು ಬಡವರ ನಂಬಿಕೆ ಗಳಿಸಿದ್ದೇವೆ, ದೇಶ ಬಯಸಿದ್ದನ್ನು ದೆಹಲಿಯೂ ಬಯಸುತ್ತದೆ ಎಂದು ಹೇಳುವ ಮೂಲಕ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆ ಖಚಿತ ಎಂದು ಪರೋಕ್ಷವಾಗಿ ತಿಳಿಸಿದರು.
ದೆಹಲಿಯನ್ನು ಜನರೇಟರ್ ನಿಂದ ಮುಕ್ತಗೊಳಿಸುತ್ತೇವೆ. 24ಗಂಟೆ ವಿದ್ಯುತ್ ನಮ್ಮ ಆಧ್ಯತೆ. ದೆಹಲಿ ಜನತೆಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದ ಪ್ರಧಾನಿ, ನಿಮ್ಮ ಕನಸೆ ನನ್ನ ಕನಸು, ಕನಸನ್ನು ನನಸು ಮಾಡಲು ದೆಹಲಿಯಲ್ಲಿ ನಮ್ಮ ಕೈಬಲ ಪಡಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ದೆಹಲಿ ರಾಜಕೀಯ ಭವಿಷ್ಯವನ್ನು ಒದು ವರ್ಷ ಹಾಳುಮಾಡಿದ ಆಪ್ ಸದಸ್ಯರು ಅರಾಜಕತವಾದಿಗಳು. ಅವರಿಗೆ ಮತದಾರ ಪ್ರಭುಗಳೇ ತಕ್ಕ ಶಿಕ್ಷೆ ನೀಡಬೇಕು ಎಂದು ಮೋದಿ ಕಿಡಿಕಾರಿದ್ದಾರೆ.
ನಮ್ಮ ಆಡಳಿತ ಕುಟುಂಬವಾದ ಜಾತಿವಾದದಿಂದ ಮುಕ್ತವಾಗಿದೆ. ನಾವು ಹೊಸ ರೀತಿ ಆಡಳಿತ ಹೊತ್ತು ಬಂದಿದ್ದೇವೆ. ಕೇವಲ ಘೋಷಣೆಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅಭಿವೃದ್ಧಿಗಾಗಿ ಸಾಕಷ್ಟು ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿನ ಬ್ಯಾಂಕ್ ಗಳು ಭ್ರಷ್ಟಾಚಾರದಿಂದ ಕೂಡಿತ್ತು. ಆದರೆ ಬ್ಯಾಂಕ್ ಗಳು ಇಂದು ಮನೆ ಮನೆಗೆ ತಲುಪುತ್ತಿವೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಒಂದೇ ವಾರದಲ್ಲಿ 1ಕೋಟಿ ಖಾತೆ ತೆರೆದಿದ್ದಾರೆ. ಜ.10ರವರೆಗೆ 11 ಕೋಟಿ ಖಾತೆ ತೆರೆಯಲಾಗಿದೆ. ಈ ವರೆಗೆ ಜನರು 8,5೦೦ ಕೋಟಿ ರೂ ಜಮಾ ಮಾಡಿದ್ದಾರೆ. ದೆಹಲಿಯಲ್ಲಿ 19.50 ಲಕ್ಷ ಜನರು ಖಾತೆ ತೆರೆದಿದ್ದಾರೆ.ಒಂದು ವರ್ಷದಲ್ಲಿ ಮಾಡುವ ಕೆಲಸವನ್ನು ಒಂದು ವಾರದಲ್ಲಿ ಮಾಡಿದ್ದಾರೆ. ಈ ಮೂಲಕ ದೇಶದ ಬಡ ಜನ ಬಿಜೆಪಿಯತ್ತ ನೋಡುತ್ತಿದ್ದಾರೆ ಎಂದರು.
ಭ್ರಷ್ಟಾಚಾರ ದೇಶದ ಅತಿ ದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದು ತಿಳಿಸಿದರು.