ಬೆಂಗಳೂರು : ಬೆಂಗಳೂರಿನ ಪೊಲೀಸರು ಬಂಧಿಸಿರುವ 3 ಶಂಕಿತ ಉಗ್ರರಿಗೆ 9ನೇ ಎಸಿಎಂಎಂ ನ್ಯಾಯಾಲಯ ಜನವರಿ 21 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.
ಭಟ್ಕಳ ಹಾಗೂ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಆರೋಪಿಗಳನ್ನು ಪೊಲೀಸರು ಜ.9ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಶಂಕಿತ ಉಗ್ರರನ್ನು 14 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ.
ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿದ ಎನ್.ಐ.ಎ ತಂಡಕ್ಕೆ ಸ್ಫೋಟಕ ವಸ್ತುಗಳನ್ನು ಹೊಂದಿರುವ ಅಬ್ದುಲ್ ಸುಬೂರ್ (24) ಎಂಬಾತ ಸಿಕ್ಕಿ ಬಿದ್ದಿದ್ದನು. ಈತ ಎಂಬಿಎ ವಿದ್ಯಾರ್ಥಿ. ಇದೇ ವೇಳೆ ಬೆಂಗಳೂರಿನಲ್ಲಿ ಸದ್ದಾಂ ಹುಸೇನ್ (35), ಸೈಯದ್ ಇಸ್ಮಾಯಿಲ್ ಅಫಕ್ (34) ಎಂಬ ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ತಮಗೆ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಜತೆ ಸಂಪರ್ಕವಿದೆ ಎಂದು ವಿಚಾರಣೆ ವೇಳೆ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರರು ಹೇಳಿದ್ದಾರೆ.