ನವದೆಹಲಿ : ಎರಡು ದಿನಗಳ ಕಾಲ ದೇಶಾದ್ಯಂತ ನಡೆದ ಕೋಲ್ ಇಂಡಿಯಾ ಲಿಮಿಟೆಡ್ ನೌಕರರ ಮುಷ್ಕರ ಹಿಂಪಡೆಯಲಾಗಿದೆ.
ತಡರಾತ್ರಿ ದೆಹಲಿಯಲ್ಲಿ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಜತೆ ನಡೆದ ಮಾತುಕತೆ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಕೋಲ್ ಇಂಡಿಯಾವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದಿಲ್ಲ, ಅದರಿಂದ ಬಂಡವಾಳ ಹಿಂಪಡೆಯುವುದಿಲ್ಲ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಒಟ್ಟಾರೆ ಮುಷ್ಕರದಿಂದ ದೇಶದ ಹೆಚ್ಚಿನ ಕಲ್ಲಿದ್ದಲು ಬ್ಲಾಕ್ಗಳಲ್ಲಿ ಕೆಲಸ ಸ್ಥಗಿತಗೊಂಡಿತ್ತು. ಮಾತ್ರವಲ್ಲದೆ ರೂ.300 ಕೋಟಿ ನಷ್ಟವಾಗಿದೆ.
ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆ ಕುರಿತಾಗಿ ಕೇಂದ್ರ ಸರಕಾರ ಕೈಗೊಂಡಿರುವ ಉಪಕ್ರಮಗಳನ್ನು ವಿರೋಧಿಸಿ ದೇಶಾದ್ಯಂತದ ನೂರಾರು ಸಾವಿರ ಕಲ್ಲಿದ್ದಲು ಕಾರ್ಮಿಕರು ಮುಷ್ಕರ ಆರಂಭಿಸಿದ್ದರು.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಕಲ್ಲಿದ್ದಲು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ನಡುವೆ ಜ.6ರಂದು ತಡರಾತ್ರಿ ನಾಲ್ಕು ತಾಸುಗಳಿಗೂ ಮೀರಿ ನಡೆದಿರುವ ಮಾತುಕತೆಯು ಯಾವುದೇ ಒಪ್ಪಂದಕ್ಕೆ ಬಾರದೇ ಇರುವುದರಿಂದ ತಾವು ಮುಷ್ಕರವನ್ನು ಮುಂದುವರಿಸುವುದಾಗಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹೇಳಿದ್ದರು.
ಕಳೆದ ಎರಡು ದಿನಗಳ ಹಿಂದೆ ಆರಂಭವಾದ ಈ ಮುಷ್ಕರದಲ್ಲಿ ದೇಶಾದ್ಯಂತದ ಐದು ಲಕ್ಷ ಕಲ್ಲಿದ್ದಲು ಕಾರ್ಮಿಕರು ಪಾಲ್ಗೊಂಡಿದ್ದರು. ಈ ಮುಷ್ಕರವನ್ನು 1977ರ ಬಳಿಕದ ಅತ್ಯಂತ ದೊಡ್ಡ ಕೈಗಾರಿಕಾ ಮುಷ್ಕರವೆಂದು ಬಣ್ಣಿಸಲಾಗಿದೆ. ಕೇಂದ್ರ ಸರ್ಕಾರಿ ಒಡೆತನದ ಕೋಲ್ ಇಂಡಿಯಾ ಕಂಪೆನಿಯಿಂದ ಬಂಡವಾಳ ಹಿಂದೆಗೆತ ವಿರೋಧಿಸಿ ಕಲ್ಲಿದ್ದಲು ಕಾರ್ಮಿಕರು ನಡೆಸುತ್ತಿರುವ ಈ ಮುಷ್ಕರದಿಂದ ದಿನಂಪ್ರತಿ 1.5 ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ ಸ್ಥಗಿತಗೊಂಡಿತ್ತು.