ನವದೆಹಲಿ : ಕೇಂದ್ರ ಸರ್ಕಾರ ಬುಧವಾರ ಅನೇಕ ನೀತಿ ಬದಲಾವಣೆಗಳನ್ನು ಘೋಷಿಸಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಕೋಲ್ ಇಂಡಿಯಾ ಲಿಮಿಟೆಡ್ ನ ಶೇ 10 ರಷ್ಟು ಪಾಲು ಮಾರಾಟ, ಕೊಚ್ಚಿನ್ ಶಿಪ್ ಯಾರ್ಡ್ ಗೆ ಸಾರ್ವಜನಿಕ ಶೇರು, ಕುಸಿಯುತ್ತಿರುವ ರಫ್ತಿಗೆ ಉತ್ತೇಜನ ನೀಡಲು ಐದು ವರ್ಷಗಳ ಬಡ್ಡಿ ಸಹಾಯಧನ ಯೋಜನೆಗಳಿಗೆ ಅನುಮೋದನೆ ನೀಡಿದೆ.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನೆನೆಗೆಗುದಿಗೆ ಬಿದ್ದ 34 ಹೆದ್ದಾರಿ ಯೋಜನೆಗಳನ್ನು ಪುನಶ್ಚೇತನಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಧಿಕಾರ ನೀಡಿದೆ. ಈ ನಿರ್ಧಾರದಿಂದ 35,000 ಕೋಟಿ ರೂ ಯೋಜನೆಗಳಿಗೆ ಚಾಲನೆ ದೊರೆಯಲಿದೆ.
ಇದರೊಂದಿಗೆ ಸಮಿತಿ, 10,000 ಕೋಟಿ ರೂ. ಬಂಡವಾಳ ಹೂಡಿಕೆಯ ರೈಲ್ವೆ ಯೋಜನೆಗಳಿಗೆ ಮತ್ತು ಮೊದಲ ಬಾರಿಗೆ ಕಬ್ಬು ಬೆಳೆಗಾರರಿಗೆ ನೇರವಾಗಿ ಸಬ್ಸಿಡಿ ಪಾವತಿಗೆ ಅನುಮೋದನೆ ನೀಡಿದೆ.
ಈ ಎಲ್ಲಾ ನಿರ್ಧಾರಗಳಿಂದ ಆರ್ಥಿಕ ಬೆಳವಣಿಗೆಗೆ, ರಫ್ತುದಾರರ ಬೆಳವಣಿಗೆಗೆ, ನೆನೆಗುದಿಗೆ ಬಿದ್ದ ಯೋಜನೆಗಳ ಪುನಶ್ಚೇತನಕ್ಕೆ ದೊಡ್ಡ ಉತ್ತೇಜನ ಸಿಗಲಿದೆ. ಇದರಿಂದ ಆರ್ಥಿಕತೆಯಲ್ಲಿ ವೇಗ ಹೆಚ್ಚಾಗಲಿದೆ ಎಂದು ಕಲ್ಲಿದ್ದಲು ಮತ್ತು ವಿದ್ಯುತ್ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.