ಥಾಯ್ ಲ್ಯಾಂಡ್ : 'ಪಂಜಾಬ್' ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬೇಅಂತ್ ಸಿಂಗ್ ಹಂತಕ ಜಗ್ತಾರ್ ಸಿಂಗ್ ನನ್ನು ಥಾಯ್ ಲ್ಯಾಂಡ್ ಪೊಲೀಸರು ಜ.6ರಂದು ಬಂಧಿಸಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಜಗ್ತಾರ್ ಸಿಂಗ್ ಭಾರತದಲ್ಲಿ ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯೂ ಸೇರಿದಂತೆ 15 ಜನ ಮೃತಪಟ್ಟಿದ್ದರು.
1995ರ ಸ್ಫೋಟದಲ್ಲಿ ಜಗ್ತಾರ್ ಸಿಂಗ್ ಸೇರಿದಂತೆ 6 ಉಗ್ರಗಾಮಿಗಳನ್ನು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿತ್ತು. 2007 ರಲ್ಲಿ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸುವುದಕ್ಕೂ ಮುಂಚೆಯೇ 2004 ರಲ್ಲಿ ಪಂಜಾಬ್ ನ ಜೈಲಿನಿಂದ ಪರಾರಿಯಾಗಿದ್ದ.
ಜಗ್ತಾರ್ ಸಿಂಗ್ ಅಕ್ಟೋಬರ್ ನಲ್ಲಿ ಥಾಯ್ ಲ್ಯಾಂಡ್ ಗೆ ಬಂದಿದ್ದು, ಸೋಮವಾರ ಅವನನ್ನು ಬಂಧಿಸಲಾಗಿದೆ ಎಂದು ಪೋಲೀಸ್ ವಕ್ತಾರ ಲೆಫ್ಟಿನೆಂಟ್ ಜನರಲ್ ಥವೋರ್ನಿಸಿರಿ ತಿಳಿಸಿದ್ದಾರೆ. ಜಗ್ತಾರ್ ಸಿಂಗ್ ನನ್ನು ಭಾರತದ ವಶಕ್ಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
1995ರ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಬೇಅಂತ್ ಸಿಂಗ್ ಪಂಜಾಬ್ ನ ಮುಖ್ಯಮಂತ್ರಿಯಾಗಿದ್ದರು. 1992 ರಲ್ಲಿ ಅಧಿಕಾರಕ್ಕೆ ಬಂದಿದ್ದ ಅವರು ಸಿಖ್ ಉಗ್ರಗಾಮಿಗಳನ್ನು ಇನ್ನಿಲ್ಲದಂತೆ ಮಟ್ಟ ಹಾಕಿದ್ದರು. ಈ ಕಾರ್ಯಾಚರಣೆಯಲ್ಲಿ ಪೊಲೀಸರು ಹಲವಾರು ಸಿಖ್ ಉಗ್ರಗಾಮಿಗಳನ್ನು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದರು.