ಮುಂಬೈ : ಚಿತ್ರಗಳನ್ನು ಸೆನ್ಸಾರ್ ಮಾಡಲು ಸಿಬಿಎಫ್ ಸಿ ಗೆ ಅವಕಾಶವಿಲ್ಲ. ಸಿನಿಮಾಟೋಗ್ರಾಫಿ ಕಾಯ್ದೆಯಲ್ಲಿ ಸೆನ್ಸಾರ್ ಎಂಬ ಪದವೇ ಇಲ್ಲ' ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
'ಉಡ್ತಾ ಪಂಜಾಬ್' ಸಿನಿಮಾದಿಂದ ಪಂಜಾಬ್ ಹೆಸರನ್ನು ಕೈಬಿಡಬೇಕು, 89 ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಸಿಬಿಎಫ್ ಸಿ ನಿರ್ಣಯ ಪ್ರಶ್ನಿಸಿ ಚಿತ್ರ ನಿರ್ಮಾಣಕಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಸ್.ಸಿ. ಧರ್ಮಾಧಿಕಾರಿ ಹಾಗೂ ಶಾಲಿನಿ ಫಣಸಾಲಕರ್ ಜೋಶಿ ಅವರಿದ್ದ ವಿಭಾಗೀಯ ಪೀಠ, ಈ ತೀರ್ಪು ನೀಡಿದೆ.
ಈ ಮೂಲಕ ಉಡ್ತಾ ಪಂಜಾಬ್ ಚಿತ್ರದ ಸೆನ್ಸಾರ್ ವಿವಾದ ಕಡೆಗೂ ಅಂತ್ಯಗೊಂಡಂತಾಗಿದೆ. ಚಿತ್ರದಲ್ಲಿ ಒಂದು ದೃಶ್ಯಕ್ಕಷ್ಟೇ ಕತ್ತರಿ ಹಾಕಿ ಎರಡು ದಿನದೊಳಗಾಗಿ ನೂತನ ಸರ್ಟಿಫಿಕೇಟ್ ನೀಡುವಂತೆ ಬಾಂಬೆ ಹೈಕೋರ್ಟ್ ಸೂಚಿಸಿದೆ. ಈ ಮೂಲಕ ಜೂನ್ 17ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಸಿಬಿಎಫ್ ಸಿ ಅಜ್ಜಿಯಂತೆ ವರ್ತಿಸುವ ಅಗತ್ಯವಿಲ್ಲ. ಸಮಯಕ್ಕೆ ಸರಿಯಾದ ಬದಲಾವಣೆ ಅಗತ್ಯ. ಜತೆಗೆ ಕಲೆಯ ವಿಚಾರದಲ್ಲಿ ಅಷ್ಟೊಂದು ಸೂಕ್ಷ್ಮವಾಗಿರುವ ಅಗತ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಚಿತ್ರದಲ್ಲಿರುವುದು ಕಾಲ್ಪನಿಕ ಕಥೆಯೇ ಹೊರತು ಸತ್ಯ ಘಟನೆ ಆಧರಿಸಿದ್ದಲ್ಲ. ಅಲ್ಲದೆ 2017ರಲ್ಲಿ ಪಂಜಾಬ್ನಲ್ಲಿ ಚುನಾವಣೆ ನಡೆಯುತ್ತಿರುವುದಕ್ಕೂ ಚಿತ್ರದಲ್ಲಿ ಪಂಜಾಬ್, ಎಲೆಕ್ಷನ್, ಪಾರ್ಲಿಮೆಂಟ್ ಪದಗಳ ಬಳಕೆ ಮಾಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಇದನ್ನು ಸಾಮಾನ್ಯ ರೀತಿಯಲ್ಲಿ ಬಳಸಲಾಗಿದೆಯೇ ಹೊರತು ಯಾವುದೇ ರಾಜಕೀಯ ಪಕ್ಷ ಸಂಬಂಧಿಸಿ ಹೇಳಿರುವುದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.