ಬೆಂಗಳೂರು : ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕನಸಿನ ಕೂಸಾಗಿ 65 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಯೋಜನಾ ಆಯೋಗಕ್ಕೆ ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಸಂಪೂರ್ಣ ರಾಜಕೀಯ ಪ್ರೇರಿತವಾದದ್ದು. ಇದರ ಹಿಂದೆ ಜನಪರ ಕಾಳಜಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ಮತ್ತು ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುವುದು ಪುನಾರಚನೆಯ ಉದ್ದೇಶ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಪುನಾರಚನೆಯ ನಿರ್ಧಾರಕ್ಕೆ ಪೂರ್ವದಲ್ಲಿ ರಾಜ್ಯಗಳ ಜೊತೆ ಗಂಭೀರ ಸ್ವರೂಪದ ಮಾತುಕತೆ ನಡೆಸದೇ ಇರುವುದು ಮತ್ತು ಎಲ್ಲವನ್ನೂ ನಿರ್ಧರಿಸಿದ ನಂತರ ಕಾಟಾಚಾರಕ್ಕೆ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ತಮ್ಮ ತೀರ್ಮಾನ ಪ್ರಕಟಿಸುವುದು ಖಂಡಿತವಾಗಿಯೂ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕ್ರಮ ಅಲ್ಲ ಎಂದರು.
ಯೋಜನಾ ಆಯೋಗ ಹಳೆಯ ಸಮಾಜವಾದದ ಗುಂಗಿನಲ್ಲಿದೆ, ಮಾರುಕಟ್ಟೆ ಕೇಂದ್ರಿತ ಆರ್ಥಿಕತೆಯ ಕಾಲದಲ್ಲಿ ಅದರ ಪಾತ್ರ ಗೌಣ ಎಂಬ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಇಲ್ಲಿಯ ವರೆಗಿನ 12 ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯಲ್ಲಿ ಯೋಜನಾ ಆಯೋಗ ಪ್ರಮುಖ ಪಾತ್ರ ವಹಿಸಿದೆ. ಯೋಜನೆಗಳನ್ನು ರೂಪಿಸಿ ಅದಕ್ಕೆ ಆರ್ಥಿಕ ನೆರವು ಕೊಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕೊಂಡಿಯಾಗಿ ಯೋಜನಾ ಆಯೋಗ ಉತ್ತಮವಾಗಿ ಕೆಲಸ ಮಾಡುತ್ತಾ ಬಂದಿದೆ. ಈ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿದೆ.
ಯೋಜನಾ ಆಯೋಗದ ಹೆಸರನ್ನು ನೀತಿ ಆಯೋಗ ಎಂದು ಮರುನಾಮಕರಣ ಮಾಡಿರುವುದರ ಹಿಂದೆ ಕೇಂದ್ರ ಸರ್ಕಾರಕ್ಕೆ ಗುಪ್ತ ಕಾರ್ಯಸೂಚಿ ಇದೆ ಎನ್ನುವ ಅನುಮಾನ ಮೂಡುತ್ತಿದೆ. ರಾಜ್ಯಗಳ ಮಾನವ ಅಭಿವೃದ್ಧಿ ಕೇಂದ್ರಿತ ಯೋಜನೆಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ, ಸಾಮಾಜಿಕ ಕ್ಷೇತ್ರದ ಯೋಜನೆಗಳು ಮತ್ತು ಯೋಜನೆಗಳ ವಿಕೇಂದ್ರೀಕರಣದ ಮೇಲೆ ಹೊಸ ವ್ಯವಸ್ಥೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ನಾನು ವ್ಯಕ್ತಪಡಿಸಿದ್ದೆ. ಈ ಆತಂಕ ನಿಜವಾಗುತ್ತಿರುವಂತೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳನ್ನೊಳಗೊಂಡ ಆಡಳಿತ ಮಂಡಳಿ ರಚನೆಯನ್ನೇ ವೈಭವೀಕರಿಸಿ ಒಕ್ಕೂಟ ವ್ಯವಸ್ಥೆಯ ಬಲವರ್ಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಸೂಕ್ಷ್ಮವಾಗಿ ನೋಡಿದರೆ ಇದರಲ್ಲಿ ಹೊಸದೇನಿಲ್ಲ. ಹಿಂದೆ ಯೋಜನಾ ಆಯೋಗ ಮುಖ್ಯಮಂತ್ರಿಗಳನ್ನೊಳಗೊಂಡ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಗೆ ವರದಿ ಸಲ್ಲಿಸುತ್ತಿತ್ತು. ಅದನ್ನು ಈಗ ಬದಲಾವಣೆ ಮಾಡಿ ಯೋಜನಾ ಆಯೋಗದಲ್ಲಿಯೇ ಆಡಳಿತ ಮಂಡಳಿಯನ್ನು ರಚಿಸಲಾಗುತ್ತಿದೆ. ಈ ರೀತಿಯ ಬದಲಾವಣೆಯಿಂದ ರಾಜ್ಯಗಳಿಗೆ ಏನೂ ಲಾಭವಾಗದು ಎಂದು ಮುಖ್ಯಮಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವ ವ್ಯವಸ್ಥೆ ಕೂಡಾ ಪರಿಪೂರ್ಣವಾದುದಲ್ಲ, ಬದಲಾವಣೆ ಎನ್ನುವುದು ಜಗದ ನಿಯಮ. ಜೊಳ್ಳನ್ನು ಕಿತ್ತೊಗೆದು ಕಾಳನ್ನು ಆರಿಸಿಕೊಳ್ಳಬೇಕಾಗುತ್ತದೆ. ನಮಗೆ ಬೇಕಾಗಿರುವುದು ಯೋಜನಾ ಆಯೋಗದ ಸುಧಾರಣೆಯೇ ಹೊರತಾಗಿ ಅದರ ರಾಜಕೀಯ ಸಮಾಧಿ ಅಲ್ಲ. ಯೋಜನಾ ಆಯೋಗ ಮಾತ್ರವಲ್ಲ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಹೊಸ ಆಲೋಚನೆಗಳೊಂದಿಗೆ ಬಲವರ್ಧಿಸಬೇಕಾಗುತ್ತದೆ. ಅಂತಹ ಯಾವುದೇ ಹೊಸತನ ಕೇವಲ ಮರು ನಾಮಕರಣದಲ್ಲಿ ಕಾಣುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.