ಬೆಂಗಳೂರು : ತಮ್ಮ ವಿರುದ್ಧ ಬಿಜೆಪಿ ಮಾಡುತ್ತಿರುವ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಡಿನೋಟಿಫಿಕೇಷನ್ ಪ್ರಕ್ರಣ, ಭೂ ಹಗರಣ್ ಎಲ್ಲವನ್ನೂ ಮುಚ್ಚಿಡುವ ಸಲುವಾಗಿ ನಮ್ಮ ವಿರುದ್ಧ ಇಂತಹ ಆರೋಪ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಎಂದರು.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಈ ತನಿಖೆಯಿಂದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬಣ್ಣ ಬಯಲಾಗಲಿದೆ ಎಂದು ತಿಳಿಸಿದರು.
ಡಿನೋಟಿಫಿಕೇಷನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಆದಾಗ್ಯೂ ಬಿಜೆಪಿ ನಾಯಕರು ತಾಲೂಕು ಮಟ್ಟದಿಂದ ಹೋರಾಟಕ್ಕೆ ಮುಂದಾಗಿರುವುದು ರಾಜಕೀಯ ತಂತ್ರವಷ್ಟೇ. ಡಿನೋಟಿಫಿಕೇಷನ್ ಪ್ರಕರಣಗಳು ಬಿಜೆಪಿಗೇ ತಿರುಗುಬಾಣವಾಗಿದೆ. ಹೀಗಾಗಿ ಈಗ ನಾಟಕ ಆರಂಭಿಸುತ್ತಿದ್ದಾರೆ ಎಂದು ಲೇವಡಿಮಾಡಿದರು.
ಅಕ್ರಮ ಭೂ ಮಂಜೂರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್ ಶೆಟ್ಟರ್ ವಿರುದ್ಧ ಎಫ್.ಐ.ಆರ್ ದಾಖಲಾಗಿರುವುದರಲ್ಲಿ ಕಾಂಗ್ರೆಸ್ ಪಾತ್ರವಿಲ್ಲ, ಸುಮ್ಮನೇ ನಮ್ಮ ವಿರುದ್ಧ ಗೂಬೆ ಕೂರಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.