ಬೆಂಗಳೂರು : ಬಿಬಿಎಂಪಿ ವಿಭಜನೆ ಕುರಿತ ನಗರಪಾಲಿಕೆಗಳ ತಿದ್ದುಪಡಿ ಕಾಯ್ದೆಯ ಪರಿಶೀಲನೆಗಾಗಿ ರಚಿಸಿರುವ ವಿಧಾನಪರಿಷತ್ತಿನ ಸೆಲೆಕ್ಟ್ ಕಮಿಟಿಯಿಂದ ಬಿಜೆಪಿಯ ಸದಸ್ಯ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಹೊರಬಂದಿದ್ದಾರೆ.
ಪಕ್ಷದ ನಾಯಕರ ಇತ್ತೀಚಿನ ಕೆಲವು ಧೋರಣೆಗಳಿಂದ ಬೇಸತ್ತು ಸೋಮಣ್ಣ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಕೆಲಸದ ಒತ್ತಡದ ಕಾರಣದಿಂದ ಆಯ್ಕೆ ಸಮಿತಿಯಲ್ಲಿ ತಾವು ಮುಂದು ವರೆಯುವುದಿಲ್ಲ ಎಂಬ ಕಾರಣ ನೀಡಿ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕರಿಗೆ ಪತ್ರ ಬರೆದಿದ್ದಾರೆ.
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಶನ್ ಗೆ ಸಂಬಂಧಿಸಿದಂತೆ ಬಿಜೆಪಿ ರಚಿಸಿದ್ದ ಆಂತರಿಕ ಸಮಿತಿಯ ನೇತೃತ್ವ ವಹಿಸಿದ್ದ ವಿ.ಸೋಮಣ್ಣ ಸಾಕಷ್ಟು ಶ್ರಮವಹಿಸಿ ವರದಿ ತಯಾರಿಸಿ ಕೊಟ್ಟರೂ ನಂತರ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಸಲು ಹಲವಾರು ದಾಖಲೆಗಳಿದ್ದರೂ ಹಿಂದೇಟು ಹಾಕಿರುವುದು ಸೋಮಣ್ಣ ಅವರಿಗೆ ಬೇಸರ ತಂದಿದೆ ಎಂದು ತಿಳಿದುಬಂದಿದೆ.