ನವದೆಹಲಿ : 'ವಿಶ್ವವಿದ್ಯಾಲಯ ಧನಸಹಾಯ ಆಯೋಗ'ವನ್ನು ರದ್ದುಗೊಳಿಸಬೇಕೆಂದು ಹೆಚ್.ಆರ್.ಡಿ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಅತಿ ಪುರಾತನವಾದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಯುಜಿಸಿ ಮಾಜಿ ಅಧ್ಯಕ್ಷ ಹರಿ ಗೌತಮ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು ಇದರಲ್ಲಿ, ಈಗಿರುವ ಆಯೋಗವನ್ನು ರದ್ದುಗೊಳಿಸಿ ಯುಜಿಸಿಯನ್ನು ಪುನಾರಚಿಸಬೇಕೆಂದು ಶಿಫಾರಸ್ಸು ಮಾಡಿದೆ.
ಮಾನವ ಸಂಪನ್ಮೂಲ ಇಲಾಖೆ ಸಚಿವಾಲಯಕ್ಕೆ ನೀಡಿರುವ ವರದಿಯಲ್ಲಿ, ಯುಜಿಸಿ ಕಾರ್ಯವೈಖರಿ ಬಗ್ಗೆ ಕೆಲವು ಲೋಪದೋಷಗಳನ್ನು ಪತ್ತೆ ಮಾಡಾಲಾಗಿದೆ. ಯುಜಿಸಿ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ವರದಿಯಲ್ಲಿ ತಿಳಿಸಲಾಗಿದೆ.
ಶೈಕ್ಷಣಿಕ ಸಂವಹನ ಒಕ್ಕೂಟ ಹಾಗೂ ಯುಜಿಸಿಯ ಪ್ರಾದೇಶಿಕ ಕಚೇರಿಗಳು ಉತ್ತಮ ಕೆಲಸಗಳನ್ನು ನಡೆಸುವಲ್ಲಿ ವಿಫಲವಾಗಿವೆ, ಹಾಗೆಯೇ ಅಲ್ಲಿನ ಹಣ ಹಾಗೂ ಮಾನವ ಶಕ್ತಿ ವ್ಯರ್ಥವಾಗುತ್ತಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ. ಹಲವು ಲೋಪದೋಷಗಳಿರುವ ಹಿನ್ನೆಲೆಯಲ್ಲಿ ಯುಜಿಸಿ ಬದಲಾಗಿ ಸಂಸತ್ ಕಾಯ್ದೆ ಮೂಲಕ ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರಾಧಿಕಾರವನ್ನು ಅಸ್ಥಿತ್ವಕ್ಕೆ ತರಬೇಕೆಂದು ಹರಿ ಗೌತಮ್ ನೇತೃತ್ವದ ವರದಿ ಶಿಫಾರಸ್ಸು ಮಾಡಿದೆ.
ಸಮಿತಿ ಶಿಫಾರಸ್ಸನ್ನು ಅಂಗೀಕರಿಸಿದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪೂರ್ಣವಾಗಿ ಬದಾವಣೆಗೊಳಗಾಗಲಿರುವ ನೆಹರೂ ಕಾಲದ 2ನೇ ಆಯೋಗ ಇದಾಗಿದೆ. ಪುನಾರಚನೆಯ ನಂತರ ಅನಧಿಕೃತ ವಿಶ್ವವಿದ್ಯಾನಿಲಯಗಳ ವಿರುದ್ಧ ಕ್ರಮ ಕೈಗೊಳ್ಳುವ ನೇರ ಅಧಿಕಾರ ಯುಜಿಸಿಗೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಎನ್.ಡಿ.ಎ ಸರ್ಕಾರ ಜುಲೈನಲ್ಲಿ ಯುಜಿಸಿ ಮಾಜಿ ಅಧ್ಯಕ್ಷ ಹರಿ ಗೌತಮ್ ನೇತೃತ್ವದಲ್ಲಿ ಯುಜಿಸಿ ಪುನಾರಚನೆಗಾಗಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಈಗಾಗಲೇ ಯುಜಿಸಿ ಪುನಾರಚನೆ ಬಗ್ಗೆ ನೀಲನಕ್ಷೆ ತಯಾರಿಸಿದೆ.
ಮೂಲಗಳ ಪ್ರಕಾರ ಯುಜಿಸಿಗೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಆಯೋಗವೆಂದು ನಾಮಕರಣ ಮಾಡುವ ಸಾಧ್ಯತೆ ಇದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ, ಭಾರತೀಯ ವೈದ್ಯ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸದಸ್ಯರನ್ನು ಆಯೋಗಕ್ಕೆ ನೇಮಕ ಮಾಡುವ ನಿರೀಕ್ಷೆ ಇದೆ.