ನವದೆಹಲಿ : ಇತ್ತೀಚೆಗಷ್ಟೇ ಯೋಜನಾ ಆಯೋಗವನ್ನು ಪುನಾರಚಿಸಿದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ಯನ್ನೂ ಪುನಾರಚನೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪೂರ್ಣವಾಗಿ ಬದಾವಣೆಗೊಳಗಾಗಲಿರುವ ನೆಹರೂ ಕಾಲದ 2ನೇ ಆಯೋಗ ಇದಾಗಿದೆ. ಪುನಾರಚನೆಯ ನಂತರ ಅನಧಿಕೃತ ವಿಶ್ವವಿದ್ಯಾನಿಲಯಗಳ ವಿರುದ್ಧ ಕ್ರಮ ಕೈಗೊಳ್ಳುವ ನೇರ ಅಧಿಕಾರ ಯುಜಿಸಿಗೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಎನ್.ಡಿ.ಎ ಸರ್ಕಾರ ಜುಲೈನಲ್ಲಿ ಯುಜಿಸಿ ಮಾಜಿ ಅಧ್ಯಕ್ಷ ಹರಿ ಗೌತಮ್ ನೇತೃತ್ವದಲ್ಲಿ ಯುಜಿಸಿ ಪುನಾರಚನೆಗಾಗಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಈಗಾಗಲೇ ಯುಜಿಸಿ ಪುನಾರಚನೆ ಬಗ್ಗೆ ನೀಲನಕ್ಷೆ ತಯಾರಿಸಿದೆ.
ಮೂಲಗಳ ಪ್ರಕಾರ ಯುಜಿಸಿಗೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಆಯೋಗವೆಂದು ನಾಮಕರಣ ಮಾಡುವ ಸಾಧ್ಯತೆ ಇದ್ದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ, ಭಾರತೀಯ ವೈದ್ಯ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸದಸ್ಯರನ್ನು ಆಯೋಗಕ್ಕೆ ನೇಮಕ ಮಾಡುವ ನಿರೀಕ್ಷೆ ಇದೆ.
ಯೋಜನಾ ಆಯೋಗಗಳನ್ನು ಪುನಾರಚನೆ ಮಾಡಿದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವನ್ನೂ ಪುನಾರಚನೆ ಮಾಡುವುದು ಅಗತ್ಯ ಎಂದು ಶಿಕ್ಷಣ ತಜ್ನರ ಅಭಿಪ್ರಾಯವಾಗಿದೆ.