ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಮತ್ತಷ್ಟು ಜಟಿಲಗೊಂಡಿದೆ. ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡ್ತೇವೆ. ಆದರೆ ನಮ್ಮ ನಿಲುವುಗಳಲ್ಲಿ ಬದಲಿಲ್ಲ. ನಮ್ಮ ಐದು ಷರತ್ತುಗಳಿಗೆ ಬಿಜೆಪಿ ಒಪ್ಪಲೇಬೇಕು ಎಂದು ಪಿಡಿಪಿ ಖಡಕ್ ಸಂದೇಶ ರವಾನಿಸಿದೆ.
ವಿಶೇಷವಾಗಿ ಸಂವಿಧಾನದ 370ನೇ ವಿಧಿಯ ಯಥಾಸ್ಥಿತಿ ಮತ್ತು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಕುರಿತಂತೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಪಿಡಿಪಿ ಸೂಚಿಸಿದೆ. ಗಮನಾರ್ಹ ತನ್ನ ಐದು ಷರತ್ತುಗಳ ಬಗ್ಗೆ ವಕ್ತಾರ ನಯೀಮ್ ಅಖ್ತರ್ ಮೂಲಕವೇ ನಿಲುವುಗಳನ್ನು ಪಿಡಿಪಿ ನಾಯಕರಾದ ಮೆಹಬೂಬಾ ಮುಫ್ತಿ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಬಹಿರಂಗಪಡಿಸುತ್ತಿದ್ದಾರೆ.
ಸರ್ಕಾರ ರಚನೆ ಬಗ್ಗೆ ಹಿಂಬಾಗಿಲ ಮಾತುಕತೆಗಳು ನಡೆಯುತ್ತಿರುವಾಗಲೇ ಪಿಡಿಪಿ ತನ್ನ ಪ್ರತ್ಯೇಕತಾವಾದಿ ಅಜೆಂಡಾ ಮುಂದಿಟ್ಟಿದೆ. ಸರ್ಕಾರ ರಚಿಸಲು ನಾವು ಸಿದ್ಧರಿದ್ದೇವೆ. ಹಾಗೆಂದು ನಮ್ಮ ಮೂಲ ನಿಲುವುಗಳಲ್ಲಿ ಯಾವುದೇ ಬದಲು ಮಾಡಿಕೊಳ್ಳುವುದಿಲ್ಲ. ನಮಗೆ ಬೆಂಬಲ ಕೊಡುವವರು (ಬಿಜೆಪಿ) ಅದನ್ನು ಪಾಲಿಸಬೇಕು. ಎಂದು ನಯೀಮ್ ಖಾನ್ ತಿಳಿಸಿದ್ದಾರೆ. ಈ ಮೂಲಕ ಕಣಿವೆ ರಾಜ್ಯದ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ಹೆಚ್ಚು ಸ್ಥಾನ ಪಡೆದ ತನ್ನ ಮಾತೇ ನಡೆಯಬೇಕು ಎಂಬ ವಾದವನ್ನು ಪರೋಕ್ಷವಾಗಿ ಅಖ್ತರ್ ಪ್ರಸ್ತಾಪಿಸಿದ್ದಾರೆ.
ಸರ್ಕಾರ ರಚನೆ ಬಗ್ಗೆ ಬಿಜೆಪಿ ಸೇರಿದಂತೆ ಎಲ್ಲರ ಜತೆಗೂ ಪಕ್ಷ ಚರ್ಚಿಸುತ್ತಿದೆ. ಆದರೆ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ನಾವು ಬೆಂಬಲ ಪಡೆಯುವವರಿಂದ ಸ್ಪಷ್ಟವಾಗಬೇಕಾಗಿದೆ ಎಂದು ಅಖ್ತರ್ ಹೇಳಿದ್ದಾರೆ. ಎನ್ಸಿ ಬೆಂಬಲ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದ ಅವರು, ಪಿಡಿಪಿಯಲ್ಲಿ ಮೆಹಬೂಬಾ ಮುಫ್ತಿ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಮಾತುಗಳೇ ಅಂತಿಮ ಎಂದಿದ್ದಾರೆ.
ಪಿಡಿಪಿ ಇಟ್ಟಿರುವ ಐದು ಷರತ್ತುಗಳು:
* ಪಿಡಿಪಿಯ ಸ್ವಯಂ ಆಡಳಿತದ ಬಗ್ಗೆ ಗೌರವ ಸೂಚಿಸಬೇಕು,ಗಡಿ ನಿಯಂತ್ರಣ ರೇಖೆಯ ಮೇಲೆ ಹೊಂದಿರುವ ನಿಲುವು ಸಡಿಲಗೊಳಿಸುವುದು.
* ಜಮ್ಮು-ಕಾಶ್ಮೀರದ ಶಾಂತಿಯುತ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ರದ್ದು.
* ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ವಿಧಿಯನ್ನು ಮತ್ತುಷ್ಟು ಬಲಪಡಿಸಬೇಕು.
* ಪಿಡಿಪಿಯ ಮುಫ್ತಿ ಮೊಹಮ್ಮದ್ ಸಯೀದ್ ಮುಖ್ಯಮಂತ್ರಿಯಾಗಿ ಆರು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಲು ಅವಕಾಶಕೊಡಬೇಕು.
* ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಪರಿಹಾರ. ಇದಲ್ಲದೆ ರಾಜ್ಯಕ್ಕೆ ಸಮಗ್ರ ಹಣಕಾಸಿನ ನೆರವು ಘೋಷಿಸಬೇಕು.