ಶ್ರೀನಗರ : ತಮ್ಮನ್ನು ಭೇಟಿಯಾದ ಪಾಕಿಸ್ತಾನ ಮೂಲದ ಕೆಲ ನಿರಾಶ್ರಿತ ಮಹಿಳೆಯರಿಗೆ, ಇಲ್ಲಿನ ಜನರಿಗೆ ಕನಿಕರವಿಲ್ಲ. ನೀವು ಏನು ಸಹಾಯ ಬೇಕೆಂದರೂ ಹುರಿಯತ್ ಕಾನ್ಫರೆನ್ಸ್ ಮುಖಂಡ ಮೀರ್ ವಾಯಿಜ್ ಉಮರ್ ಫಾರೂಖ್ ಅವರನ್ನು ಕೇಳಿ' ಎಂದು ಹೇಳುವ ಮೂಲಕ ಕಾಶ್ಮೀರದ ಆಡಳಿತಾರೂಢ ಪಿಡಿಪಿ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್ ಭಟ್ ವಿವಾದಕ್ಕೀಡಾಗಿದ್ದಾರೆ.
ಕಾಶ್ಮೀರಿಗಳನ್ನು ಮದುವೆಯಾದ ಕೆಲ ಪಾಕಿಸ್ತಾನಿ ಮಹಿಳೆಯರು ಕಾಶ್ಮೀರದಲ್ಲಿ ಆಶ್ರಯ ಸಮಸ್ಯೆ ಎದುರಿಸುತ್ತಿದ್ದು, ಅವರು ನಿಜಾಮುದ್ದೀನ್ ರನ್ನು ಸಹಾಯಕ್ಕೆ ಭೇಟಿ ಮಾಡಿದ್ದರು. ಆಗ ಅವರು "ಸರ್ಕಾರದಿಂದ ಏನೂ ಆಗದು. ಫಾರೂಖ್ ಒಂದು ಟ್ರಸ್ಟ್ ನಡೆಸುತ್ತಿದ್ದಾರೆ. ಅವರು ನಿಮಗೆ ಸಹಾಯ ಮಾಡುತ್ತಾರೆ ಹೋಗಿ' ಎಂದು ಹೇಳಿದ್ದಾರೆ.
ಪಿಡಿಪಿ ನಾಯಕನೇ ಈ ರೀತಿ ಸರ್ಕಾರದ ಕೈಯಿಂದ ಏನೂ ಆಗದು. ಪಾಕ್ ಪರ ಮಾತನಾಡುವ ಪ್ರತ್ಯೇಕತಾವಾದಿಯನ್ನು ಕೇಳಿ ಎಂದಿರುವುದು ಆಡಳಿತಾರೂಢ ಪಿಡಿಪಿ ಮತ್ತು ಬಿಜೆಪಿ ಮೈತ್ರಿಕೂಟವನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ನಿಜಾಮುದ್ದೀನ್ ವಜಾಕ್ಕೆ ಬಿಜೆಪಿ ಆಗ್ರಹಿಸಿದೆ.
ಈ ನಡುವೆ ನಾನು ಫಾರೂಖ್ ಅವರನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸಲ್ಲ. ಅವರೊಬ್ಬ ನಾಗರಿಕ ಸಮಾಜದ ಮುಖಂಡ ಎಂದು ಪರಿಗಣಿಸುವೆ. ಮಾನವೀಯ ದೃಷ್ಟಿಯಿಂದ ಈ ಮಹಿಳೆಯರಿಗೆ ಫಾರೂಖ್ ಸಹಾಯ ಮಾಡುತ್ತಾರೆ ಎಂದಿದ್ದೇನೆ ವಿನಾ ಬೇರಾವ ಉದ್ದೇಶದಿಂದಲೂ ಅಲ್ಲ ಎಂಬ ಹೇಳಿಕೆ ನೀಡಿದ್ದಾರೆ.