ಮುಂಬೈ : ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ-ಶಿವಸೇನೆ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರೆದಿದೆ. ಈ ನಡುವೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ.
ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ಶಿವಸೇನೆ ಮಹತ್ವದ ಸಭೆ ನಡೆಯುತ್ತಿದ್ದು, ಈ ವೇಳೆ ಮಾತನಾಡಿದ ಉದ್ಧವ್ ಠಾಕ್ರೆ, ಸೀಟು ಹಂಚಿಕೆ ಒಂದು ಜಟಿಲ ಸಮಸ್ಯೆಯಾಗಿದೆ. ಈ ವಿಚಾರವನ್ನೇ ತುಂಬಾ ಎಳೆಯಬೇಡಿ. ನಾವು ಚುನಾವಣೆಯಲ್ಲಿ ಗೆಲ್ಲಬೇಕು ಎಂದುಕೊಂಡಿದ್ದೇವೆ ಎಂದಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಗೆದ್ದೇ ಗೆಲ್ಲುತ್ತದೆ. ಜನರ ಸೇವೆ ಮಾಡಲು ಅಧಿಕಾರ ಬೇಕೇ ಬೇಕು. ಆದರೆ ಚುನಾವಣೆಗೂ ಮುನ್ನ ಏನಾಗುತ್ತಿದೆ ತಿಳಿಯುತ್ತಿಲ್ಲ, ಚುನಾವಣೆಗೂ ಮೊದಲಿನ ಬೆಳವಣಿಗೆ ಅನಿರಿಕ್ಷಿತ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನಾನು ಅಧಿಕಾರ ಬಯುಸುತ್ತಿದ್ದೇನೆ. ಜನತೆ ನನಗೆ ಅಧಿಕಾರ ನೀಡಲು ಸಿದ್ಧರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೋಪಿನಾಥ್ ಇದ್ದರು. ಹೀಗಾಗಿ ಬಿಜೆಪಿ-ಶಿವಸೇನೆ ಸ್ನೇಹಕ್ಕೆ ಯಾವುದೇ ಸಮಸ್ಯೆಯಾಗಿರಲಿಲ್ಲ ಎಂದಿದ್ದಾರೆ.
25 ವರಷಗಳ ಕಾಲ ಎರಡೂ ಪಕ್ಷಗಳ ಸ್ನೇಹ ಹಿಂದುತ್ವದ ಮೇಲೆ ನಿಂತಿತ್ತು. ಆದರೆ ಈಗ ಸ್ನೇಹ ಮುರಿದರೆ ದು:ಖವಾಗುತ್ತದೆ ಎಂದಿರುವ ಉದ್ಧವ್ ಠಾಕ್ರೆ, ಇದು ಸ್ನೇಹ ಉಳಿಸಿಕೊಳ್ಳಲು ನನ್ನ ಕೊನೆ ಯತ್ನ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲಿ ನಮಗೆ ಅಧಿಕಾರ ಕೊಡಲಿ. ನಮ್ಮನ್ನು ಕೀಳಾಗಿ ನೋಡಬೇಡಿ. ಎಲ್ಲದಕ್ಕೂ ನಾವು ಸಿದ್ಧರಿದ್ದೇವೆ ಎಂದು ಬಿಜೆಪಿಗೆ ಎಚ್ಚರಿಸಿದ್ದಾರೆ.