ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಸರ್ಕಾರ ರಚನೆ ಕಸರತ್ತು ನಡೆಸುತ್ತಿರುವ ಬಿಜೆಪಿಯನ್ನು ಆರ್.ಎಸ್.ಎಸ್ ತರಾಟೆಗೆ ತೆಗೆದುಕೊಂಡಿದ್ದು ಸರ್ಕಾರ ರಚನೆಗಾಗಿ ಪಿಡಿಪಿಯೊಂದಿಗೆ ಕೆಲವು ವಿಷಯಗಳಲ್ಲಿ ರಾಜಿಮಾಡಿಕೊಂಡಿರುವುದನ್ನು ವಿರೋಧಿಸಿದೆ.
ಏಕರೂಪ ನಾಗರಿಕ ಸಂಹಿತೆ, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಎ.ಎಫ್.ಎಸ್.ಪಿ.ಎ) ಹಾಗೂ ಆರ್ಟಿಕಲ್ 370 ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿ ಪಿಡಿಪಿಯೊಂದಿಗೆ ರಾಜಿಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಆರ್.ಎಸ್.ಎಸ್ ಅಸಮಾಧಾನ ವ್ಯಕ್ತಪಡಿಸಿದೆ.
ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಭಾರತೀಯ ಸೇನೆ ದುರುಪಯೋಗಪಡಿಸಿಕೊಳ್ಳುತ್ತಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ತೆಗೆದುಹಾಕುವುದಾಗಿ ಜಮ್ಮು-ಕಾಶ್ಮೀರದ ಚುನಾವಣೆಗೂ ಮುನ್ನ ಪಿಡಿಪಿ ಭರವಸೆ ನೀಡಿತ್ತು. ಅಲ್ಲದೇ ಆರ್ಟಿಕಲ್ 370 ರದ್ದುಗೊಳಿಸುವುದಕ್ಕೆ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಕ್ಕೆ ಪಿಡಿಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಘೋಷಣೆಯಾಗಿತ್ತು. ಬಿಜೆಪಿಯೊಂದಿಗೆ ಸರ್ಕಾರ ರಚನೆ ಮಾಡಬೇಕಿದ್ದರೆ ಪಿಡಿಪಿ ಕೆಲ ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತುಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸುವುದು, ಆರ್ಟಿಕಲ್ 370ಯನ್ನು ಮುಂದುವರೆಸುವುದು ಪ್ರಮುಖವಾಗಿತ್ತು. ಸರ್ಕಾರ ರಚನೆ ಕಾರಣದಿಂದ ಬಿಜೆಪಿ ಪಿಡಿಪಿಯೊಂದಿಗೆ ರಾಜಿಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆರ್.ಎಸ್.ಎಸ್ ಅಸಮಾಧಾನ ವ್ಯಕ್ತಪಡಿಸಿದೆ.
ಡಿಸೆಂಬರ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಿಡಿಪಿಗೆ 28 ಸ್ಥಾಗಳು ದೊರೆತಿದ್ದವು, 25 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.