ಜಾರ್ಖಂಡ್ : ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೆ ದಿನ್ ಘೋಷ ವಾಕ್ಯದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಮೋದಿ ಭರವಸೆಯ ಒಳ್ಳೆಯ ದಿನಗಳು ಯಾವಗ ಬರಲಿವೆ ಎಂದು ಪ್ರಶ್ನಿಸಿದ್ದಾರೆ.
ಜಾರ್ಖಂಡ್ ನಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದು 7-8 ತಿಂಗಳು ಕಳೆದಿವೆ. ಆದರೆ ಒಳ್ಳೆಯ ದಿನಗಳು ಇನ್ನೂ ಬಂದಿಲ್ಲ. ಸರ್ಕಾರ, ಮಹಿಳೆಯರು ಮತ್ತು ರೈತರ ಸಬಲೀಕರಣದ ಬಗ್ಗೆ ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಮೋದಿ ಪ್ರಧಾನಿಯಾದಾಗಿನಿಂದ ಒಳ್ಳೆಯ ದಿನಗಳು ಕೆಲವೇ ಕೆಲವು ವ್ಯಾಪಾರಿಗಳಿಗೆ ಬಂದಿದೆ. ಸಾಮಾನ್ಯ ಜನತೆಗೆ ಉಪಯೋಗವಾಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ದೇಶದ ಜನತೆಗೆ ಶಕ್ತಿ ನೀಡಲು ಬಯಸುತ್ತದೆ. ಆದರೆ ಮೋದಿ ಸರ್ಕಾರ ಒಗ್ಗಟ್ಟಿನಿಂದ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂದು ಎಂದಿಗೂ ಹೇಳುವುದಿಲ್ಲ. ಒಂದು ವೇಳೆ ಜಾರ್ಖಂಡ್ ನಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಬುಡಕಟ್ಟು ಜನರ ಭೂಮಿಯನ್ನು ಮೋದಿ ಸರ್ಕಾರ ಕಿತ್ತುಕೊಳ್ಳಲಿದೆ ಎಂದು ಆರೋಪಿಸಿದ್ದಾರೆ.
ಭೂಮಿ ಕಿತ್ತುಕೊಂಡ ನಂತರ ಮೋದಿ ಸರ್ಕಾರ ಸ್ವಚ್ಛಗೊಳಿಸಲು ಬುಡಕಟ್ಟು ಜನರ ಕೈಗೆ ಪೊರಕೆ ನೀಡಲಿದೆ. ಬಿಜೆಪಿಯಿಂದಾಗಿ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಜಾರ್ಖಂಡ್ ಅಭಿವೃದ್ಧಿಯಾಗಿಲ್ಲ ಆದ್ದರಿಂದ ಬಿಜೆಪಿಗೆ ಮತ ನೀಡಬೇಡಿ ಎಂದು ರಾಹುಲ್ ಗಾಂಧಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.