ನವದೆಹಲಿ : ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಯಾವುದೇ ಅಧಿಕಾರ ಹೊಂದದೇ ದೆಹಲಿಯಿಂದ ದುಬೈಗೆ ತೆರಳುವ ವಿಮಾನದಲ್ಲಿ ಬಿಸ್ನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿ ಆಮ್ ಆದ್ಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ವಿಮಾನ ಪ್ರಯಾಣದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಕೆನಾಮಿ ಕ್ಲಾಸ್(ಮಿತವ್ಯಯಿ ದರ್ಜೆಯ)ಯಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ ಅಧಿಕಾರ ದೊರೆತರೂ ಸಾಮಾನ್ಯ ಜನರಂತೆಯೇ ಇರುವುದಾಗಿ ಘೋಷಿಸಿದ್ದ ಅರವಿಂದ್ ಕೇಜ್ರಿವಾಲ್ ಅವರ ಈ ನಡೆಗೆ ದೇಶಾದ್ಯಂತ ತೀವ್ರ ಲೇವಡಿ ವ್ಯಕ್ತವಾಗಿದೆ.
ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಡಿ.4ರಿಂದ 5 ದಿನಗಳ ಕಾಲ ದುಬೈ ಹಾಗೂ ನ್ಯೂಯಾರ್ಕ್ ಪ್ರವಾಸ ಕೈಗೊಂಡಿದ್ದಾರೆ. ದುಬೈ ನ ವಿಶ್ವ ಬ್ರಾಂಡ್ಸ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಕೇಜ್ರಿವಾಲ್ ಗೆ ಸಾಮಾಜಿಕ ಬದಲಾವಣೆ ಮೂಡಿಸಿದ್ದಕ್ಕೆ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತಿದೆ.
ಕೇಜ್ರಿವಾಲ್ ದುಬೈ ಪ್ರಯಾಣಕ್ಕಾಗಿ ಬಿಸ್ನೆಸ್ ಕ್ಲಾಸ್ ವಿಮಾನ ಟಿಕೆಟ್ ಪಡೆದಿದ್ದಕ್ಕಾಗಿ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆಪ್ ಪಕ್ಷ, ವಿಶ್ವ ಬ್ರಾಂಡ್ಸ್ ಸಮ್ಮೇಳನದ ಆಯೋಜಕರೇ ಕೇಜ್ರಿವಾಲ್ ಅವರಿಗೆ ಬಿಸ್ನೆಸ್ ಕ್ಲಾಸ್ ನಲ್ಲಿ ಪ್ರಯಾಣೀಸಲು ಟಿಕೆಟ್ ನೀಡಿರುವುದಾಗಿ ತಿಳಿಸಿದ್ದಾರೆ.
ಆದರೂ ಆಮ್ ಆದ್ಮಿ ಪಕ್ಷದ ಮುಖಂಡ ಕೇಜ್ರಿವಾಲ್ ಬಿಸ್ನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು, ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ 'ಆಮ್ ಆದ್ಮಿ'ಯೂ ಬಿಸ್ನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಅಚ್ಚೆ ದಿನ್ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.