ನವದೆಹಲಿ : ಡಿ.15ರ ಬೆಳಿಗ್ಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದರ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿ.ಬಿ.ಎಸ್.ಇ. ಶಾಲೆಗಳಲ್ಲಿ ಡಿ.25ರಂದು ಕ್ರಿಸ್ ಮಸ್ ದಿನದಂದು ರಜೆ ನೀಡುವ ಬದಲು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಉತ್ತಮ ಆಡಳಿತ ದಿನವನ್ನು ಅಚರಿಸಬೇಕು ಹಾಗೂ ಈ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕೆಂದು ಸ್ಮೃತಿ ಇರಾನಿ ಆದೇಶ ನೀಡಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ್ದ ಸುದ್ದಿಯನ್ನು ತಳ್ಳಿಹಾಕಿರುವ ಸ್ಮೃತಿ ಇರಾನಿ ಟೈಮ್ಸ್ ಆಫ್ ಇಂಡಿಯಾ ವರದಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವರದಿ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ, ಡಿ.25ರ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ವರದಿಗಾರರು ತಪ್ಪು ವರದಿ ಪ್ರಕಟಿಸಿದ್ದಾರೆ. ಡಿ.25ರಂದು ಎಲ್ಲಾ ಶಾಲೆಗಳಲ್ಲೂ ರಜೆ ನೀಡಲಾಗಿದೆ. ಆದರೆ ಆನ್ ಲೈನ್ ಮೂಲಕ ಪ್ರಬಂಧ ಸ್ಪರ್ಧೆ ಆಯೋಜಿಸಲು ಮಾತ್ರ ಸೂಚನೆ ನೀಡಲಾಗಿದೆ ಎಂದು ಸ್ಮೃತಿ ಇರಾನಿ ಸ್ಪಷ್ಟಪಡಿಸಿದ್ದಾರೆ.
ತಪ್ಪು ವರದಿ ಪ್ರಕಟಿಸಿರುವ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಇದರಿಂದ ತೀವ್ರ ಮುಜುಗರ ಉಂಟಾಗಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲೂ ಸಹ ಮಾಧ್ಯಮಗಳು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಆದೇಶದ ಬಗ್ಗೆ ತಪ್ಪು ವರದಿ ಪ್ರಕಟಿಸಿದ್ದವು. ಈಗ ಮತ್ತೊಮ್ಮೆ ಇಂತಹದ್ದೇ ಘಟನೆ ನಡೆದಿದೆ.