ನವದೆಹಲಿ : ಡಿ.25ರಂದು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ದೇಶಾದ್ಯಂತ ಇರುವ ವಿಶ್ವವಿದ್ಯಾನಿಲಯಗಳಿಗೆ ಸೂಚನೆ ನೀಡಿದೆ.
ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಕ್ರಿಸ್ ಮಸ್ ದಿನದಂದು ಶಾಲಾ-ಕಾಲೇಜುಗಳಿಗೆ ರಜೆ ನೀಡದೇ ಇರಲು ನಿರ್ಧರಿಸಿದ್ದಾರೆ ಎಂಬ ಮಾಧ್ಯಮಗಳ ವರದಿ ಬಗ್ಗೆ ದೇಶಾದ್ಯಂತ ಚರ್ಚೆ ನಡೆದಿತ್ತು. ಅಲ್ಲದೇ ಇದು ವಿವಾದಕ್ಕೂ ಗ್ರಾಸವಾಗಿತ್ತು.
ಎಲ್ಲಾ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಯುಜಿಸಿ ಹೊರಡಿಸಿರುವ ಆದೇಶದಲ್ಲಿ ಕ್ರಿಸ್ ಮಸ್ ದಿನದಂದು ಉತ್ತಮ ಆಡಳಿತ ದಿನ ಆಚರಣೆ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಇಂಡಿಯಾ ಟುಡೆ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಉತ್ತಮ ಆಡಳಿತ ದಿನ ಆಚರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಅಂದು ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ನಡೆಸಬೇಕೆಂದು ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಆದೇಶಿಸಿದ್ದರು.
ಉತ್ತಮ ಆಡಳಿತ ದಿನದ ಕಾರ್ಯಕ್ರಮಗಳು ಕ್ರಿಸ್ ಮಸ್ ರಜೆಗೆ ಅಡ್ಡಿ ಉಂಟು ಮಾಡುವುದಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ. ರಜೆಗೂ ಮುನ್ನ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ. ಕ್ರಿಸ್ ಮಸ್ ದಿನದಂದು ಉತ್ತಮ ಆಡಳಿತ ದಿನ ಆಚರಿಸುವ ಸಚಿವೆ ಸ್ಮೃತಿ ಇರಾನಿ ನಿರ್ಧಾರದ ವಿರುದ್ಧ ಸಂಸತ್ ನಲ್ಲಿಯೂ ಆಕ್ಷೇಪ ವ್ಯಕ್ತವಾಗಿತ್ತು.