ಲಖ್ನೌ : ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕವೇ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಸಚಿವ ಆಜಂ ಖಾನ್, ಈ ಬಾರಿ ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.
ಮಾಧ್ಯಮಗಳು ಹಂತಕನನ್ನು ಪ್ರಧಾನಿ ಮಾಡಿವೆ ಎಂದು ಹೇಳುವ ಮೂಲಕ ಆಜಂ ಖಾನ್ ಹೊಸದೊಂದು ವಿವಾದ ಸೃಷ್ಠಿಸಿದ್ದಾರೆ. 2002ರ ಗುಜರಾತ್ ಗಲಭೆಯ ವಿಷಯವನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಆಜಂ ಖಾನ್, 'ಮಾಧ್ಯಮಗಳು ಅವುಗಳ ವ್ಯಾಪ್ತಿಯನ್ನು ಮೀರುತ್ತಿವೆ, ಈ ಬೆಳೆವಣಿಗೆಯಿಂದಾಗಿ ದೇಶಕ್ಕೆ ಹಾನಿಯುಂಟಾಗಲಿದೆ' ಎಂದು ಹೇಳಿದ್ದಾರೆ.
ಮಾಧ್ಯಮಗಳು ಉತ್ತರ ಪ್ರದೇಶದಲ್ಲಿ ನಡೆದ ಮುಲಾಯಂ ಸಿಂಗ್ ಯಾದವ್ ಜನ್ಮದಿನಾಚರಣೆಯ ಖರ್ಚು ವೆಚ್ಚಗಳ ಬಗ್ಗೆ ಪ್ರಶ್ನೆ ಮಾಡುತ್ತವೆ. ಮರಕ್ಕೆ ನೇಣುಬಿಗಿದುಕೊಂಡ ಯುವತಿಯರನ್ನು ತೋರಿಸುತ್ತವೆ. ಆದರೆ ಅದಾನಿ ಆಸ್ತಿಯ ಲೆಕ್ಕ ಕೇಳುವುದಿಲ್ಲ ಎಂದು ಆಜಂ ಖಾನ್ ಕಿಡಿ ಕಾರಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಖಾನ್, ರಾಮ್ ನಾಯ್ಕ್ ಉತ್ತರ ಪ್ರದೇಶದ ರಾಜ್ಯಪಾಲರಂತೆ ವರ್ತಿಸುವುದಕ್ಕಿಂತಲೂ ಪೂಜಾರಿಯಂತೆ ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
57 ಕುಟುಂಬಗಳ ಸಾಮೂಹಿಕ ಮತಾಂತರದ ವಿಷಯದ ಬಗ್ಗೆಯೂ ಮಾತನಾಡಿದ ಆಜಂ ಖಾನ್ ಹಿಂದೂಗಳು ಮತಾಂತರ ಮಾಡುವುದಕ್ಕೂ ಮುನ್ನ ದೇವಸ್ಥಾನದಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಬೇಕೆಂದು ಸಲಹೆ ನೀಡಿದ್ದಾರೆ.
ಆಜಂ ಖಾನ್ ಹೇಳಿಕೆಗೆ ತಿರುಗೇಟು ನೀಡಿರುವ ವಿಶ್ವ ಹಿಂದೂ ಪರಿಷತ್ ನ ಮುಖಂಡ ಚಾಂಪತ್ ರಾಯ್, ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಆಜಂಖಾನ್ ಕೂಡ ಹಿಂದೂ ಎಂಬುದನ್ನು ಮರೆಯಬಾರದು ಎಂದಿದ್ದಾರೆ. ಆಜಂ ಖಾನ್ ರ ಮೂಲ ಹಿಂದೂ ಧರ್ಮವೇ ಆಗಿದೆ. ಅನುಮಾನವಿದ್ದಲ್ಲಿ ಡಿ.ಎನ್.ಎ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ರಾಯ್ ಹೇಳಿದ್ದಾರೆ.