ನವದೆಹಲಿ : ಏ.14ರಂದು ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಆರ್.ಎಸ್.ಎಸ್ ನ ಆರ್ಗನೈಜರ್ ಪಾಂಚಜನ್ಯ ಪತ್ರಿಕೆಗಳು, ಅಂಬೇಡ್ಕರ್ ಅವರ ಬಗ್ಗೆ ವಿಶೇಷ ಸಂಚಿಕೆಗಳನ್ನು ಹೊರತರುತ್ತಿವೆ. ಅಂಬೇಡ್ಕರ್ ಅವರು ಘರ್ ವಾಪಸಿ ಪರವಾಗಿದ್ದರು ಎಂದು ಈ ಸಂಚಿಕೆಯಲ್ಲಿ ಆರ್.ಎಸ್.ಎಸ್ ಹೇಳಿದೆ.
ಆರ್.ಎಸ್.ಎಸ್ ನ ಜಂಟಿ ಕಾರ್ಯದರ್ಶಿ ಕೃಷ್ಣಗೋಪಾಲ್ ಅವರು ಹಾಗೂ ಅನೇಕ ದಲಿತ ನಾಯಕರ ಲೇಖಗಳು ಈ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಸುಮಾರು 200 ಪುಟಗಳ ವಿಶೇಷ ಸಂಚಿಕೆಯನ್ನು ಆರ್.ಎಸ್.ಎಸ್ ನ ಸಂಘಟನಾ ಕಾರ್ಯದರ್ಶಿ ಭೈಯ್ಯಾಜಿ ಸುರೇಶ್ ಜೋಷಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಹಿಂದೂ ಧರ್ಮದಿಂದ ಮತಾಂತರಗೊಂಡ, ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರುವುದನ್ನು ಅಂಬೇಡ್ಕರ್ ಬೆಂಬಲಿಸಿದ್ದರು ಎಂಬ ವಿಷಯವನ್ನು 200 ಪುಟಗಳಷ್ಟಿರುವ ಸಂಚಿಕೆಯಲ್ಲಿ ದಾಖಲಿಸಲಾಗಿದೆ. ಆರ್.ಎಸ್.ಎಸ್ ಇದೇ ಪ್ರಥಮ ಬಾರಿಗೆ ಅಂಬೇಡ್ಕರ್ ಬಗ್ಗೆ ಸಂಗ್ರಾಹಕರ ಆವೃತ್ತಿಯನ್ನು ಹೊರತಂದಿದೆ. ಇದರಲ್ಲಿ ಘರ್ ವಾಪಸಿ, ಪಾಕಿಸ್ತಾನ ಹಾಗೂ ಇಸ್ಲಾಮ್ ನ ಬಗ್ಗೆ ಅಂಬೇಡ್ಕರ್ ಅಭಿಪ್ರಾಯವನ್ನು ಪ್ರಕಟಿಸಿದೆ.
ಹೈದ್ರಾಬಾದ್ ನಲ್ಲಿ ಪರಿಶಿಷ್ಟ ಜಾತಿಯ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಾಗ, ಇದರ ವಿರುದ್ಧವಾಗಿ ಅಂಬೇಡ್ಕರ್ ಎಚ್ಚರಿಕೆ ನೀಡಿದ್ದರು ಎಂದು ಆರ್ಗನೈಜರ್ ಪತ್ರಿಕೆಯ ಸಂಪಾದಕ ಪ್ರಫುಲ್ಲ ಕೇತ್ಕರ್ ಹೇಳಿದ್ದಾರೆ.